ಭೋಪಾಲ: ಚುನಾವಣಾ ಆಯೋಗ ವಿಧಿಸಿದ್ದ ಮೂರು ದಿನಗಳ ಪ್ರಚಾರ ನಿರ್ಬಂಧ ಉಲ್ಲಂಘಿಸಿರುವಮಧ್ಯಪ್ರದೇಶದ ಬಿಜೆಪಿ ಅಭ್ಯರ್ಥಿ ಸಾಧ್ವಿಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಮತ್ತೊಂದು ನೋಟಿಸ್ ಜಾರಿ ಮಾಡಲಾಗಿದೆ.
ಮೇ.2ರಿಂದ 72 ಗಂಟೆಗಳ ವರೆಗೆ ಪ್ರಚಾರದಲ್ಲಿ ಭಾಗವಸದಂತೆ ಸಾಧ್ವಿ ಪ್ರಜ್ಞಾಗೆ ಚುನಾವಣಾ ಆಯೋಗ ಸೂಚನೆ ನೀಡಿತ್ತು. ಆದರೆ, ಆಯೋಗದ ನಿಷೇಧವನ್ನೂ ಲೆಕ್ಕಿಸದ ಪ್ರಜ್ಞಾ ಸಿಂಗ್ ಅವರು, ಭೋಪಾಲದ ದೇಗುಲಗಳಿಗೆ ತೆರಳಿ, ಸಭೆಗಳಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು.ಇದೇ ಹಿನ್ನೆಲೆಯಲ್ಲಿ ಭೋಪಾಲದ ಚುನಾವಣಾಧಿಕಾರಿಗೆ ಕಾಂಗ್ರೆಸ್ ದೂರು ನೀಡಿತ್ತು. ಅದರಂತೆ ಪ್ರಜ್ಞಾ ಸಿಂಗ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಸಾಧ್ವಿ ಪ್ರಜ್ಞಾ ಸಿಂಗ್ ಅವರು ಭೋಪಾಲದ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆಯಾದ ನಂತರ ಅವರಿಗೆ ನೀಡಲಾಗುತ್ತಿರುವ ಮೂರನೇ ನೋಟಿಸ್ ಇದಾಗಿದೆ. ಉಗ್ರ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಸತ್ತಿದ್ದು ನನ್ನ ಶಾಪದಿಂದ ಎಂಬ ಹೇಳಿಕೆಗೆ ಒಂದು, ನೋಟಿಸ್ ಮತ್ತು ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿನ ನನ್ನ ಪಾತ್ರದ ಬಗ್ಗೆ ನನಗೆ ಹೆಮ್ಮೆ ಇದೆ ಎಂಬ ಅವರ ಹೇಳಿಕೆಗೆ ಸಂಬಂಧಿಸಿದಂತೆ ಒಂದುನೋಟಿಸ್ ಈಗಾಗಲೇ ನೀಡಲಾಗಿದೆ. ಈಗ ನಿಯಮ ನಿಷೇಧ ಉಲ್ಲಂಘಿಸಿದ್ದಕ್ಕೆ ಮತ್ತೊಂದು ನೋಟಿಸ್ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ನೋಟಿಸ್ಗೆ ಪ್ರಜ್ಞಾ ಸಿಂಗ್ ಉತ್ತರ ನೀಡಬೇಕಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ‘ನಾನೊಬ್ಬ ಸನ್ಯಾಸಿನಿ. ದೇಗುಲಗಳು, ಪ್ರಾರ್ಥನೆ, ಆಧ್ಯಾತ್ಮ, ದೇಶ, ಗೋ ರಕ್ಷಣೆಯೇ ನನ್ನ ಬದುಕು. ಇದರಿಂದ ನನ್ನನ್ನು ನಿರ್ಬಂಧಿಸುವವರು ಒಂದು ಬಾರಿ ಯೋಚನೆ ಮಾಡಬೇಕು,’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.