ನವದೆಹಲಿ: ಹಾಸನ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಪ್ರಜ್ವಲ್ ರೇವಣ್ಣ ಶುಕ್ರವಾರ ಮಧ್ಯಾಹ್ನ 2.30 ಗಂಟೆಗೆ ಸದಸ್ಯರಾಗಿ ಕನ್ನಡದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಅವರ ತಂದೆ, ಸಚಿವ ಎಚ್.ಡಿ.ರೇವಣ್ಣ, ತಾಯಿ ಭವಾನಿ ರೇವಣ್ಣ ಹಾಗೂ ಹಾಸನ ಜಿಲ್ಲೆಯ ಕೆಲ ಶಾಸಕರು ಮತ್ತು ಕುಟುಂಬದ ಸದಸ್ಯರು ಸಭಿಕರ ಗ್ಯಾಲರಿಯಲ್ಲಿ ಇದ್ದರು.
ಈ ಮೊದಲು ಜೂನ್ 17, 19ರಂದು ಎರಡು ಬಾರಿ ಪ್ರತಿಜ್ಞಾವಿಧಿ ಸ್ವೀಕರಿಸಲು ಅವರ ಹೆಸರು ಕರೆಯಲಾಗಿತ್ತು. ಇವರನ್ನು ಹೊರತುಪಡಿಸಿ ರಾಜ್ಯದ ಉಳಿದ ಎಲ್ಲ 27 ಸದಸ್ಯರು ಜೂನ್ 17ರಂದು ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು.
ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಪ್ರಜ್ವಲ್ ರೇವಣ್ಣ, ‘ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದ ಕಾರಣ ಮೊದಲ ಎರಡು ದಿನನಾನು ಸದನಕ್ಕೆ ಬರಲಾಗಲಿಲ್ಲ’ ಎಂದು ತಿಳಿಸಿದರು.
ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕುರಿತ ಪ್ರಶ್ನೆಗೆ, ‘ರಾಜೀನಾಮೆ ಪತ್ರವನ್ನು ಪಕ್ಷದ ವರಿಷ್ಠರೂ ಆದ ನನ್ನ ತಾತ ಎಚ್.ಡಿ. ದೇವೇಗೌಡ ಅವರಿಗೆ ನಾನು ಸಲ್ಲಿಸಿದ್ದೇನೆ. ಪತ್ರ ಅವರ ಬಳಿಯೇ ಇದೆ. ರಾಜೀನಾಮೆ ನೀಡುವ ನಿರ್ಧಾರಕ್ಕೆ ಈಗಲೂ ಬದ್ಧನಾಗಿದ್ದೇನೆ. ಆದರೆ, ದೇವೇಗೌಡರೇ ಅದನ್ನು ನಿರಾಕರಿಸಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.