ADVERTISEMENT

ವಿದ್ಯುತ್‌ ಉತ್ಪಾದನೆಗಾಗಿ ಕಲ್ಲಿದ್ದಲಿನ ಕೊರತೆ ಇಲ್ಲ: ಸಚಿವ ಪ್ರಲ್ಹಾದ ಜೋಷಿ

ಪಿಟಿಐ
Published 13 ಅಕ್ಟೋಬರ್ 2021, 10:06 IST
Last Updated 13 ಅಕ್ಟೋಬರ್ 2021, 10:06 IST
ಪ್ರಲ್ಹಾದ ಜೋಷಿ
ಪ್ರಲ್ಹಾದ ಜೋಷಿ   

ಬಿಲಾಸ್‌ಪುರ, ಛತ್ತೀಸ್‌ಗಡ: ‘ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ಕಲ್ಲಿದ್ದಲಿನ ಪೂರೈಕೆಯಲ್ಲಿ ಯಾವುದೇ ಕೊರತೆ ಆಗುವುದಿಲ್ಲ’ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಷಿ ಬುಧವಾರ ಇಲ್ಲಿ ಹೇಳಿದರು.

ಕೋಲ್‌ ಇಂಡಿಯಾ ಲಿಮಿಟೆಡ್‌ನ ಅಂಗಸಂಸ್ಥೆ ಎಸ್‌ಇಸಿಎಲ್‌ ನಿರ್ವಹಿಸುತ್ತಿರುವ ಗೆವ್ರಾ, ದಿಪ್ಕಾ ಹಾಗೂ ಕುಸ್ಮುಂಡಾ ಕಲ್ಲಿದ್ದಲು ಗಣಿಗಳಲ್ಲಿನ ದಾಸ್ತಾನು ಹಾಗೂ ಗಣಿಗಾರಿಕೆ ಕುರಿತ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಅವರು ಇಲ್ಲಿನ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಲ್ಲಿದ್ದಲು ಕೊರತೆ ಉಂಟಾಗಿದೆ ಎಂಬುದಾಗಿ ಕಾಂಗ್ರೆಸ್‌ ವದಂತಿ ಹಬ್ಬಿಸುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಈ ವಿಷಯವನ್ನು ರಾಜಕೀಯಗೊಳಿಸಲು ನಾನು ಬಯಸುವುದಿಲ್ಲ. ಅಗತ್ಯವಿರುವ ಕಲ್ಲಿದ್ದಲು ಪೂರೈಕೆಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದಷ್ಟೇ ಹೇಳುವೆ’ ಎಂದು ಉತ್ತರಿಸಿದರು.

ADVERTISEMENT

‘ವಿದ್ಯುತ್‌ ಉತ್ಪಾದನೆಗೆ ಈಗ 10 ಲಕ್ಷ ಟನ್ ಕಲ್ಲಿದ್ದಲು ಅಗತ್ಯ ಇದ್ದು, ಈಗಾಗಲೇ 20 ಲಕ್ಷ ಟನ್‌ ಕಲ್ಲಿದ್ದಲನ್ನು ಪೂರೈಕೆ ಮಾಡಲಾಗಿದೆ. ದಾಸ್ತಾನು ಕೂಡ ಹೆಚ್ಚುತ್ತಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಕೊರತೆ ಕಂಡುಬರುವುದಿಲ್ಲ’ ಎಂದು ಪುನರುಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.