ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ.
‘ಮಾಜಿ ರಾಷ್ಟ್ರಪತಿಗಳ ಆರೋಗ್ಯ ಗಂಭೀರವಾಗಿದೆ. ಅವರಿಗೆ ವೆಂಟಿವೇಟರ್ ಅಳವಡಿಸಿ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ’ ಎಂದು ಇಲ್ಲಿನ ಸೇನೆಯ ಆರ್ ಆ್ಯಂಡ್ ಆರ್ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
ಮಿದುಳಿನಲ್ಲಿ ರಕ್ತಹೆಪ್ಪುಗಟ್ಟಿದ್ದ ಕಾರಣ ಅವರಿಗೆ ಸೋಮವಾರ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಅವರಿಗೆ ಕೋವಿಡ್–19 ಇರುವುದೂ ದೃಢಪಟ್ಟಿದೆ.
‘ನನ್ನ ತಂದೆಗೆ ಸೂಕ್ತ ಎನಿಸುವುದನ್ನು ದೇವರು ದಯಪಾಲಿಸಲಿ. ಯಾವುದೇ ಸಂದರ್ಭ ಎದುರಾದರೂ ಅದನ್ನು ಸ್ವೀಕರಿಸುವ ಶಕ್ತಿಯನ್ನು ಭಗವಂತ ನನಗೆ ನೀಡಲಿ’ ಪ್ರಣವ್ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಪ್ರಾರ್ಥಿಸಿದ್ದಾರೆ.
‘ಕಳೆದ ವರ್ಷ ಆಗಸ್ಟ್ 8ರಂದು ನನಗೆ ಸಂಭ್ರಮದ ದಿನ. ಅಂದು ತಂದೆಗೆ ಭಾರತ ರತ್ನ ಪುರಸ್ಕಾರ ಪ್ರದಾನ ಮಾಡಲಾಯಿತು. ಒಂದು ವರ್ಷದ ಬಳಿಕ ಆಗಸ್ಟ್ 10ರಂದು ಅವರ ಆರೋಗ್ಯ ಹದಗೆಟ್ಟಿತು. ದೇವರ ಇಚ್ಛೆ ಏನಿದೆಯೋ ಹಾಗೆ ನಡೆಯಲಿ. ನನಗೆ ಸಂತೋಷ ಮತ್ತು ದುಃಖವನ್ನು ಸಮಾನವಾಗಿ ಸ್ವೀಕರಿಸುವ ಶಕ್ತಿಯನ್ನು ದೇವರು ನೀಡಲಿ’ ಎಂದು ಹೇಳಿದ್ದಾರೆ.
ಶರ್ಮಿಷ್ಠಾ ಅವರು ದೆಹಲಿ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷೆಯೂ ಆಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.