ಪುಣೆ: ಕರ್ತವ್ಯದ ಮೇಲಿದ್ದ ಅರಣ್ಯ ರಕ್ಷಕಿ ಹಾಗೂ ಪತಿಯನ್ನು ಮಾಜಿ ಸರಪಂಚ ಮತ್ತು ಪತ್ನಿ ಥಳಿಸಿದ್ದಾರೆ ಎನ್ನಲಾದ ಘಟನೆ ಸತಾರಾ ಜಿಲ್ಲೆಯ ಪಲಸಾವಡೆ ಗ್ರಾಮದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ, ಸರಪಂಚ ಹಾಗೂ ಪತ್ನಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಥಳಿತಕ್ಕೆ ಒಳಗಾಗಿರುವ ಅರಣ್ಯ ರಕ್ಷಕಿ ಮೂರು ತಿಂಗಳ ಗರ್ಭಿಣಿ.
ಮಹಿಳೆ ಹಾಗೂ ಆಕೆಯ ಪತಿಯನ್ನು ಥಳಿಸುತ್ತಿರುವ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮಹಾರಾಷ್ಟ್ರ ಪರಿಸರ ಸಚಿವ ಆದಿತ್ಯ ಠಾಕ್ರೆ ಈ ವಿಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ಆರೋಪಿಗಳನ್ನು ಬಂಧಿಸಲಾಗಿದೆ. ಇಂಥ ದುಷ್ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಠಾಕ್ರೆ ಟ್ವೀಟ್ ಮಾಡಿದ್ದಾರೆ.
‘ಬುಧವಾರ ಈ ಘಟನೆ ನಡೆದಿದೆ. ಅರಣ್ಯ ರಕ್ಷಕಿ ನೀಡಿದ ದೂರಿನನ್ವಯ, ಆರೋಪಿಗಳಾದ ರಾಮಚಂದ್ರ ಜಂಕಾರ್ ಹಾಗೂ ಪತ್ನಿಯನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯಕುಮಾರ್ ಬನ್ಸಲ್ ಹೇಳಿದ್ದಾರೆ.
‘ಆರೋಪಿಯು ಮಾಜಿ ಸರಪಂಚ ಹಾಗೂ ಗ್ರಾಮ ಅರಣ್ಯ ನಿರ್ವಹಣೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಗುತ್ತಿಗೆ ಕಾರ್ಮಿಕರನ್ನು ತನ್ನ ಅನುಮತಿ ಪಡೆಯದೇ ಕರ್ತವ್ಯಕ್ಕೆ ಕರೆದುಕೊಂಡು ಹೋಗಿದ್ದಕ್ಕಾಗಿ ಅರಣ್ಯ ರಕ್ಷಕಿ ಮೇಲೆ ಆರೋಪಿಗೆ ಕೋಪ ಬಂದಿತ್ತು. ಈ ಕಾರಣಕ್ಕಾಗಿ ಆರೋಪಿ ಹಾಗೂ ಆತನ ಪತ್ನಿ, ಅರಣ್ಯ ರಕ್ಷಕಿಯನ್ನು ಥಳಿಸಿದ್ದಾರೆ’ ಎಂದು ಬನ್ಸಲ್ ಹೇಳಿದ್ದಾರೆ.
‘ಅರಣ್ಯ ರಕ್ಷಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು. ಭ್ರೂಣಕ್ಕೆ ಹಾನಿಯಾಗಿದ್ದು ಕಂಡು ಬಂದಲ್ಲಿ ಆರೋಪಿಗಳ ವಿರುದ್ಧ ಸಂಬಂಧಪಟ್ಟ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗುವುದು’ ಎಂದೂ ಅವರು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.