ADVERTISEMENT

ಅಂತರ್ಜಾತಿ ದಂಪತಿಗೆ ‘ಸುರಕ್ಷಿತ ಮನೆ’

ಪಿಟಿಐ
Published 5 ಮಾರ್ಚ್ 2020, 19:45 IST
Last Updated 5 ಮಾರ್ಚ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ಅಂತರ್ಜಾತಿ ಅಥವಾ ಅಂತರ ಧರ್ಮೀಯ ವಿವಾಹವಾಗಿರುವ ಕಾರಣಕ್ಕೆ ಬೆದರಿಕೆ ಅಥವಾ ಸಾಮಾಜಿಕ ಬಹಿಷ್ಕಾರ ಎದುರಿಸುವ ದಂಪತಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ಕೇರಳ ಸರ್ಕಾರ ರೂಪಿಸುತ್ತಿದೆ.

‘ಸಾಮಾಜಿಕ ನ್ಯಾಯ ಇಲಾಖೆಯವತಿಯಿಂದ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ‘ಸುರಕ್ಷಿತ ಮನೆ’ಗಳನ್ನು
ನಿರ್ಮಿಸುವ ವಿಶಿಷ್ಟ ಯೋಜನೆಯೊಂದನ್ನು ರೂಪಿಸಲಾಗಿದೆ. ಸಾಮಾಜಿಕಬಹಿಷ್ಕಾರ ಅಥವಾ ಬೆದರಿಕೆ ಎದುರಿಸುವ ದಂಪತಿಯು ಗರಿಷ್ಠ ಒಂದು ವರ್ಷ ಇಂಥ ಮನೆಗಳಲ್ಲಿ ಆಶ್ರಯ ಪಡೆಯಬಹುದಾಗಿದೆ. ಇಂಥ ದಂಪತಿಗೆ ರಕ್ಷಣೆ ನೀಡುವುದು ಈ ಯೋಜನೆಯ ಉದ್ದೇಶ’ ಎಂದು ಕೇರಳದ ಸಾಮಾಜಿಕ ನ್ಯಾಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.

ಗುರುವಾರ ಕೇರಳ ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಅವರು, ‘ಸ್ವಯಂಸೇವಾ ಸಂಸ್ಥೆಗಳ ಸಹಾಯದಿಂದ ಈ ಯೋಜನೆಯನ್ನು ಕಾರ್ಯಗತ ಗೊಳಿಸಲಾಗುವುದು. ಅಂತರ್ಜಾತಿ ಅಥವಾ ಅಂತರ ಧರ್ಮೀಯ ವಿವಾಹವಾಗಿರುವ ಸಾಮಾನ್ಯ ವರ್ಗದದಂಪತಿಗೆ ಇಲಾಖೆಯ ವತಿಯಿಂದ ₹30,000 ಹಾಗೂ ದಂಪತಿಯಲ್ಲಿ ಯಾರಾದರೊಬ್ಬರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರಾಗಿದ್ದರೆ ಅಂಥವರಿಗೆ ₹75,000 ನೆರವು ನೀಡುವ ಯೋಜನೆ ಈಗಾಗಲೇ ಜಾರಿಯಲ್ಲಿದೆ. ಇಂಥ ದಂಪತಿ ಸರ್ಕಾರಿ ಉದ್ಯೋಗದಲ್ಲಿದ್ದರೆ, ವರ್ಗಾವಣೆಯ ಸಂದರ್ಭದಲ್ಲಿ ಅವರನ್ನು ವಿಶೇಷ ಆದ್ಯತೆ ಎಂದು ಪರಿಗಣಿಸಲಾಗುವುದು. ಆದರೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ಅವಕಾಶಗಳಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.