
ನಾಗ್ಪುರ: ದೇಶದಲ್ಲಿರುವ ಎಲ್ಲರಿಗೂ ತಮ್ಮ ಬೆಳವಣಿಗೆ ಹೊಂದಲು ಸಮಾನವಾದ ಅವಕಾಶಗಳು ಸಿಕ್ಕಾಗ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವೆಂದು ಕರೆಯಬಹುದು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಅಭಿಪ್ರಾಯಪಟ್ಟಿದ್ದಾರೆ.
ನಾಗ್ಪುರದಲ್ಲಿ ಬ್ರಹ್ಮಕುಮಾರಿ ಸಂಘಟನೆಯ ವತಿಯಿಂದ ಆಯೋಜಿಸಲಾಗಿದ್ದ ‘ಒಗ್ಗಟ್ಟು ಮತ್ತು ನಂಬಿಕೆಯ ಮೂಲಕ ಮಹಾರಾಷ್ಟ್ರದ ಸುವರ್ಣ ಯುಗ’ ಎನ್ನುವ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.
ಈ ಅಭಿಯಾನವು ಮಹಾರಾಷ್ಟ್ರದಾದ್ಯಂತ ನಂಬಿಕೆ, ಸಾಮರಸ್ಯ, ಒಗ್ಗಟ್ಟು ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತಲು ನೆರವಾಗಲಿದೆ. ನಾವೆಲ್ಲರೂ ಜೀವನದಲ್ಲಿ ನಕಾರಾತ್ಮಕತೆಯನ್ನು ತ್ಯಜಿಸಿ, ಸಕಾರಾತ್ಮಕತೆಯನ್ನು ಸ್ವೀಕರಿಸಬೇಕು ಎಂದು ಹೇಳಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರು ನ್ಯಾಯ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಆಚಾರ್ಯ ದೇವವ್ರತ, ರಾಜ್ಯ ಹಣಕಾಸು ಸಚಿವ ಚಂದ್ರಶೇಖರ್ ಬವಾಂಕುಲೆ ಹಾಗೂ ಬ್ರಹ್ಮಕುಮಾರಿ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.