ADVERTISEMENT

ರಾಷ್ಟ್ರ ನಿರ್ಮಾಣಕ್ಕೆ ಮತದಾನ ಒಂದು ಕೊಡುಗೆ–ದ್ರೌಪದಿ ಮುರ್ಮು

ಪಿಟಿಐ
Published 25 ಜನವರಿ 2023, 14:22 IST
Last Updated 25 ಜನವರಿ 2023, 14:22 IST
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು   

ನವದೆಹಲಿ: ರಾಷ್ಟ್ರ ನಿರ್ಮಾಣಕ್ಕೆ ಮತದಾನವನ್ನು ಜನರು ತಮ್ಮ ಕೊಡುಗೆ ಎಂದು ಪರಿಗಣಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಹೇಳಿದರು.

13ನೇ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ಭಾರತದ ಚುನಾವಣಾ ಪ್ರಕ್ರಿಯೆ ಮತ್ತು ಪ್ರಜಾಪ್ರಭುತ್ವದ ಸಾಧನೆಯಾಗಿದೆ ಎಂದರು.

ಚುನಾವಣಾ ಆಯೋಗವು ಭವಿಷ್ಯದಲ್ಲಿ ಶೇ 75ರಷ್ಟು ಮತದಾನವಾಗುವಂತೆ ಮಾಡುವ ಗುರಿ ಹೊಂದಿದೆ. ಹೀಗಾಗಿ ಜನರು ಮತಚಲಾಯಿಸುವುದು ರಾಷ್ಟ್ರದ ಸರ್ವಶ್ರೇಷ್ಠ ಕೆಲಸ ಎಂದು ತಿಳಿಯಬೇಕು ಎಂದರು.

ADVERTISEMENT

2019ರ ಲೋಕಸಭಾ ಚುನಾವಣೆಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿತ್ತು ಎಂದ ಅವರು, ಭಾರತೀಯ ಸಂಸತ್ತಿನಲ್ಲಿ ಮಹಿಳಾ ಸಂಸದೆಯರ ಸಂಖ್ಯೆ 115ಕ್ಕೆ ತಲುಪಿರುವುದು ಇತಿಹಾಸದಲ್ಲಿ ಇದೇ ಮೊದಲಾಗಿದೆ ಎಂದರು.

ಗ್ರಾಮ ಪಂಚಾಯತಿಯಿಂದ ಸಂಸತ್ತಿನವರೆಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಮುಂದಿನ ದಿನಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು ಎಂದು ಅವರು ಹೇಳಿದರು.

ಕಳೆದ ಏಳು ದಶಕಗಳಿಂದ ದೇಶದ ಮೂಲೆಯಲ್ಲಿರುವ ಪ್ರಜೆ ಕೂಡ ದೇಶ ಅಥವಾ ರಾಜ್ಯವನ್ನು ಯಾರು ಮತ್ತು ಹೇಗೆ ಆಳಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗಿರುವುದು ಮತದಾನದ ಪ್ರಕ್ರಿಯೆಯಿಂದ. ಇದು ಸಾಮಾಜಿಕ ಕ್ರಾಂತಿಗೆ ಸಾಧ್ಯವಾಗಿದೆ. ಇದು ಪ್ರಜಾಪ್ರಭುತ್ವದ ಜಯ ಎಂದರು.

ಇದೇ ವೇಳೆ ಅವರು ಇತ್ತೀಚೆಗೆ ಮತದಾರರಾದ ಐದು ಯುವಕರಿಗೆ ಚುನಾವಣಾ ಗುರುತಿನ ಚೀಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.