ತಿರುಪತಿ: ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) 14 ಮಂದಿ ಅರ್ಚಕರಿಗೆ ಕೋವಿಡ್–19 ದೃಢಪಟ್ಟಿದೆ.
ಈ ಸಂಬಂಧ ಟಿಟಿಡಿಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಸಿಂಘಲ್ ಅವರು ದೇವಾಲಯದ ಪುರೋಹಿತರು, ಆರೋಗ್ಯ ಮತ್ತು ಇತರೆ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ್ದಾರೆ.
ಇದೇ ವಿಚಾರವಾಗಿ ಟಿಟಿಡಿಯ ಪ್ರಧಾನ ಅರ್ಚಕರಾಗಿದ್ದ ರಮಣ ದೀಕ್ಷಿತುಲು ಟ್ವೀಟ್ ಮಾಡಿ, '50 ಅರ್ಚಕರ ಪೈಕಿ 15 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಕ್ವಾರಂಟೈನ್ ಆಗಿದ್ದಾರೆ. ಇನ್ನೂ 25 ಮಾದರಿಗಳ ಫಲಿತಾಂಶ ಬರಬೇಕಿದೆ. ಟಿಟಿಡಿಯ ಅಧಿಕಾರಿಗಳು ದರ್ಶನ ನಿಲ್ಲಿಸಲು ನಿರಾಕರಿಸಿದ್ದಾರೆ....ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಿ' ಎಂದು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರನ್ನು ಟ್ಯಾಗ್ ಮಾಡಿದ್ದಾರೆ.
ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದರೂ ದೇವಾಲಯಗಳಲ್ಲಿ ದರ್ಶನ ಅವಕಾಶ ಮುಂದುವರಿಸಿರುವ ಬಗ್ಗೆ ಹಲವು ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಈವರೆಗೂ ಟಿಟಿಡಿಯ 91 ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವುದಾಗಿ ಭಾನುವಾರ ಸಿಂಘಲ್ ಹೇಳಿದ್ದರು.
'ಜುಲೈ 10ರ ವರೆಗೂ ತಿರುಮಲದ ಟಿಟಿಡಿಯ 1865 ಸಿಬ್ಬಂದಿ, ಅಲಿರಿಯಲ್ಲಿನ 1,704 ಟಿಟಿಡಿ ಸಿಬ್ಬಂದಿ ಹಾಗೂ 631 ಭಕ್ತಾದಿಗಳಿಗೆ ಕೊರೊನಾ ವೈರಸ್ ಸೋಂಕು ಪರೀಕ್ಷೆ ನಡೆಸಲಾಗಿದೆ. ತಿರುಮಲದ 91 ಮಂದಿ ಟಿಟಿಡಿ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಸಿಬ್ಬಂದಿ ಆರೋಗ್ಯ ದೃಷ್ಟಿಯಿಂದ ಅವರಿಗೆ ಕ್ಯಾಂಟಿನ್ನಲ್ಲಿ ವಿಶೇಷ ಆಹಾರ ನೀಡಲಾಗುತ್ತಿದೆ' ಎಂದು ಮಾಹಿತಿ ನೀಡಿದ್ದರು.
ತಿರುಪತಿಗೆ ಭೇಟಿ ನೀಡಿದ್ದ ಭಕ್ತಾದಿಗಳ ಪೈಕಿ ಜೂನ್ 18ರಿಂದ 24ರ ವರೆಗೂ 700 ಭಕ್ತಾದಿಗಳಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಲಾಗಿದೆ. ಜುಲೈ 1ರಿಂದ 7ರ ವರೆಗೂ 1,943 ಭಕ್ತಾದಿಗಳಿಗೆ ಫೋನ್ ಮೂಲಕ ಸಂಪರ್ಕಿಸಲಾಗಿದೆ. ಎಲ್ಲ ಭಕ್ತಾದಿಗಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.