ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿಅಂಪನ್ ಚಂಡಮಾರುತದಿಂದ ₹1 ಲಕ್ಷ ಕೋಟಿಯಷ್ಟು ಹಾನಿ ಸಂಭವಿಸಿದೆ ಎಂದಿರುವ ಪ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ₹53 ಸಾವಿರ ಕೋಟಿಗಳ ಪರಿಹಾರವನ್ನು ಈಗಲಾದರೂ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಚಂಡಮಾರುತದಿಂದ ಹಾನಿಗೀಡಾದ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಶುಕ್ರವಾರ ವೈಮಾನಿಕ ಸಮೀಕ್ಷೆ ನಡೆಸಿ, ಬಸಿರ್ಹತ್ ಎಂಬಲ್ಲಿ ಪ್ರಧಾನಿ ಜೊತೆ ಸಭೆ ನಡೆಸಿದ ಅವರು, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ‘ಈ ಬಿಕ್ಕಟ್ಟಿನ ಸಮಯದಲ್ಲಿ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ,’ ಎಂದು ಅವರು ಹೇಳಿದರು.
ಇದೇ ವೇಳೆ, ಪ್ರಧಾನಿ ಮೋದಿ ಘೋಷಿಸಿದ ₹1 ಸಾವಿರ ಕೋಟಿಗಳ ಪರಿಹಾರದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.
ತುರ್ತು ನಿಧಿಯಾಗಿ ₹1 ಸಾವಿರ ಕೋಟಿ ನೀಡುವುದಾಗಿ ಪ್ರಧಾನಿ ಘೋಷಿಸಿದರು. ಆದರೆ ಅದು ಮುಂಗಡವೋ ಅಥವಾ ಪ್ಯಾಕೇಜೋ ಎಂಬುದನ್ನು ಸ್ಪಷ್ಟಪಡಿಸಲಿಲ್ಲ. ಮುಂದಿನದ್ದನ್ನು ನಂತರ ನಿರ್ಧರಿಸುತ್ತೇವೆ ಎಂದು ಮೋದಿ ಹೇಳಿದರು. ಈಗ ಕೊಡುತ್ತಿರುವುದು ಮುಂಗಡವೂ ಆಗಿರಬಹುದು ಎಂದು ಅವರು ಹೇಳಿದ್ದಾರೆ. ‘ಏನು ಕೊಡಬೇಕು ಎಂಬುದನ್ನು ನೀವು ನಿರ್ಧರಿಸಿ. ನಾವು ನಿಮಗೆ ವಿವರಗಳನ್ನು ನೀಡುತ್ತೇವೆ,’ ಎಂದು ನಾನು ಪ್ರಧಾನಿಗೆ ತಿಳಿಸಿದ್ದೇನೆ ಎಂದು ಮಮತಾ ಹೇಳಿದರು.
ಇದನ್ನೂ ಓದಿ:ಅಂಪನ್ ಚಂಡಮಾರುತ: 1.9 ಕೋಟಿ ಮಕ್ಕಳು ಅಪಾಯದಲ್ಲಿ
‘ನಾವು ಜನರಿಗೆ ಸಹಾಯ ಮಾಡಬೇಕಾಗಿದೆ. ಆದ್ದರಿಂದ ನಾವು ಪರಿಹಾರ ಕಾರ್ಯಗಳನ್ನು ಪ್ರಾರಂಭಿಸಿದ್ದೇವೆ. ಆಹಾರ ಸಬ್ಸಿಡಿ, ಸಾಮಾಜಿಕ ಯೋಜನೆಗಳು ಮತ್ತು ಕೇಂದ್ರ ಯೋಜನೆಗಳೂ ಸೇರಿದಂತೆ ಹಲವು ರಾಜ್ಯಕ್ಕೆ ₹53,000 ಕೋಟಿಯಷ್ಟು ಬಾಕಿ ಹಣ ಬರಬೇಕಾಗಿದೆ. ನೀವು ಈ ಸಂದರ್ಭದಲ್ಲಿ ಹಣ ಕೊಡಲು ಪ್ರಯತ್ನಿಸಿದರೆ, ನಾವು ಸಂಕಷ್ಟದ ಪರಿಸ್ಥಿತಿ ಎದುರಿಸಲು ನೆರವಾಗುತ್ತದೆ ಎಂದು ಪ್ರಧಾನಿಗೆ ತಿಳಿಸಿದ್ದೇನೆ,’ ಎಂದು ಮಮತಾ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.