ADVERTISEMENT

ಶಾಂತಿ ಕದಡಿದ ಆರೋಪದಡಿ ಪ್ರಿಯಾಂಕಾ ಬಂಧನ: ಅತಿಥಿಗೃಹವೇ ತಾತ್ಕಾಲಿಕ ಜೈಲು

ಐಎಎನ್ಎಸ್
Published 5 ಅಕ್ಟೋಬರ್ 2021, 9:34 IST
Last Updated 5 ಅಕ್ಟೋಬರ್ 2021, 9:34 IST
ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ   

ಸೀತಾಪುರ: ನಿಷೇಧಾಜ್ಞೆ ಉಲ್ಲಂಘನೆ, ಶಾಂತಿ ಕದಡಿದ ಆರೋಪದ ಮೇಲೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ವಿರುದ್ಧ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಹರಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನುಬಂಧಿಸಲಾಗಿದೆ.

ಉತ್ತರ ಪ್ರದೇಶದ ಲಖಿಂಪುರ–ಖೇರಿ ಎಂಬಲ್ಲಿ ಭಾನುವಾರ ನಡೆದಿದ್ದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದರು. ಘಟನೆ ಸ್ಥಳಕ್ಕೆ ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಸೋಮವಾರ ಸೀತಾಪುರ ಎಂಬಲ್ಲಿ ಪೊಲೀಸರು ವಶಕ್ಕೆ ಪಡೆದು, ಪಿಎಸಿ ಅತಿಥಿ ಗೃಹದಲ್ಲಿ ಇರಿಸಿದ್ದರು. ಸದ್ಯ ಇದೇ ಕೊಠಡಿಯನ್ನು ತಾತ್ಕಾಲಿಕ ಜೈಲಾಗಿ ಪರಿಗಣಿಸಲಾಗಿದೆ.

ಪಕ್ಷದ ನಾಯಕಿಯನ್ನು ವಶಕ್ಕೆ ಪಡೆದಿರುವ ಉತ್ತರ ಪ್ರದೇಶ ಪೊಲೀಸರ ಕ್ರಮವನ್ನು ಖಂಡಿಸಿ ಕಾಂಗ್ರೆಸ್‌ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದೆ. ಮಂಗಳವಾರ ಕೂಡ ದೇಶದ ಹಲವು ನಾಯಕರು ಪ್ರಿಯಾಂಕಾ ಭೇಟಿಗಾಗಿ ಸೀತಾಪುರಕ್ಕೆ ತೆರಳಿದರಾದರೂ, ಅವರನ್ನೆಲ್ಲ ಲಖನೌ ವಿಮಾನ ನಿಲ್ದಾಣದಲ್ಲೇ ತಡೆಯಲಾಗಿದೆ.

ADVERTISEMENT

ಈ ಮಧ್ಯೆ ಪ್ರಿಯಾಂಕಾ ಸೇರಿದಂತೆ 11 ವಿರುದ್ಧ ಶಾಂತಿ ಕದಡಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 151, 107 ಮತ್ತು 116ರ ಪ್ರಕರಣಗಳನ್ನು ಅವರ ಮೇಲೆ ಹಾಕಲಾಗಿದೆ.

ಇಂದು ಮುಂಜಾನೆ ಟ್ವೀಟ್‌ ಮಾಡಿದ್ದ ಪ್ರಿಯಾಂಕಾ ಗಾಂಧಿ ಅವರು, ಲಖಿಂಪುರ–ಖೇರಿಯಲ್ಲಿ ನಡೆದ ದುರ್ಘಟನೆಯ ವಿಡಿಯೊವನ್ನು ಹಂಚಿಕೊಂಡಿದ್ದರು. ಯಾವುದೇ ಎಫ್ಐಆರ್ ಇಲ್ಲದೆ 28 ಗಂಟೆಗಳ ಕಾಲ ನನ್ನನ್ನು ಬಂಧಿಸಲಾಗುತ್ತದೆಯಾದರೆ, ನಾಲ್ವರು ರೈತರನ್ನು ಕೊಂದ ವ್ಯಕ್ತಿಯನ್ನು ಬಂಧಿಸಲಾಗಿಲ್ಲ ಏಕೆ ಎಂದು ಅವರು ಪ್ರಶ್ನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.