
ಪ್ರಿಯಾಂಕಾ ಗಾಂಧಿ ವಾದ್ರಾ
(ಪಿಟಿಐ ಚಿತ್ರ)
ನವದೆಹಲಿ: 'ಸಂಸತ್ತಿನಲ್ಲಿ ಜನ ಸಾಮಾನ್ಯರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು ನಾಟಕವಲ್ಲ. ಬದಲಾಗಿ ಪ್ರಜಾಸತ್ತಾತ್ಮಕ ಚರ್ಚೆಗೆ ಅವಕಾಶ ನೀಡದಿರುವುದೇ ನಾಟಕ' ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
'ವಿರೋಧ ಪಕ್ಷಗಳು ಸಂಸತ್ತಿನಲ್ಲಿ ನಾಟಕವಾಡುತ್ತಿವೆ' ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ, 'ಎಸ್ಐಆರ್, ವಾಯು ಮಾಲಿನ್ಯಗಳಂತಹ ತುರ್ತು ವಿಷಯಗಳ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಬೇಕಿದೆ' ಎಂದು ಒತ್ತಾಯಿಸಿದ್ದಾರೆ.
'ಇವುಗಳೇ ಸಂಸತ್ತಿನಲ್ಲಿ ಚರ್ಚಿಸಬೇಕಾದ ಸಾರ್ವಜನಿಕ ವಿಷಯಗಳಾಗಿವೆ. ಸಂಸತ್ತು ಇರುವುದು ಏಕೆ? ಅಲ್ಲಿ ನಡೆಯುವುದು ನಾಟಕವಲ್ಲ. ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದು ನಾಟಕವಲ್ಲ' ಎಂದು ಅವರು ಹೇಳಿದ್ದಾರೆ.
'ನಾವು ವಾಯು ಮಾಲಿನ್ಯದ ಕುರಿತು ಮಾತನಾಡಿದ್ದೇವೆ. ಈ ವಿಷಯಗಳ ಕುರಿತು ಚರ್ಚಿಸಲು ಅವಕಾಶ ಏಕೆ ನೀಡುತ್ತಿಲ್ಲ' ಎಂದು ಕೇಳಿದ್ದಾರೆ.
'ವಿರೋಧ ಪಕ್ಷಗಳು ಬಿಹಾರ ವಿಧಾನಸಭಾ ಚುನಾವಣೆಯ ಸೋಲಿನ ಹತಾಶೆಯನ್ನು ಹೊರಹಾಕಲು ಸಂಸತ್ತನ್ನು ಬಳಸಿಕೊಳ್ಳುತ್ತಿವೆ' ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.