ಇಂಫಾಲ್: ಭೂ ವಿವಾದಕ್ಕೆ ಸಂಬಂಧಿಸಿದಂತೆ ಮಣಿಪುರದ ಎರಡು ಗ್ರಾಮಗಳ ಜನರ ನಡುವೆ ಘರ್ಷಣೆ ನಡೆದಿದ್ದು 25 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ 12 ಮಂದಿ ಭದ್ರತಾ ಸಿಬ್ಬಂದಿ ಇದ್ದಾರೆ. ಮುಂಜಾಗ್ರತಾ ಕ್ರಮವಾಗಿ ತಮೆಂಗ್ಲಾಂಗ್ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಾಗಾ ಸಮುದಾಯದ ಜನರು ವಾಸವಿರುವ ಹಳೇ ತಮೆಂಗ್ಲಾಂಗ್ ಹಾಗೂ ಡಯಾಲಾಂಗ್ ಗ್ರಾಮಸ್ಥರ ನಡುವೆ ಭೂ ವಿವಾದ ಏರ್ಪಟ್ಟಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲು ಹಳೇ ತಮೆಂಗ್ಲಾಂಗ್ನ 2000 ನಿವಾಸಿಗಳು ಬುಧವಾರ ಸಂಜೆ ಮೆರವಣಿಗೆ ಹೊರಟಿದ್ದರು.
ಈ ವೇಳೆ ಡಯಾಲಾಂಗ್ನ ಗ್ರಾಮಸ್ಥರು ಡುಗೈಲಾಂಗ್ ಎಂಬ ಸ್ಥಳೀಯ ಗ್ರಾಮಸ್ಥರ ಜತೆ ಸೇರಿ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಘರ್ಷಣೆ ಉಂಟಾಗಿದೆ. ಗಲಾಟೆ ವೇಳೆ ಲೋಕೋಪಯೋಗಿ ಇಲಾಖೆಯ ಕಟ್ಟಡಕ್ಕೆ ಜನರು ಬೆಂಕಿ ಹಚ್ಚಿದ್ದಾರೆ.
ಪರಿಸ್ಥಿತಿ ಉದ್ವಿಗ್ನಗೊಂಡಿರುವ ಕಾರಣ ಬಿಎನ್ಎಸ್ಎಸ್ ಸೆಕ್ಷನ್ 163ರ ಅನ್ವಯ ಜಿಲ್ಲೆಯ ಕೇಂದ್ರ ಭಾಗ ಹಾಗೂ ಡಯಾಲಾಂಗ್, ಡುಗೈಲಾಂಗ್, ಹಳೇ ತಮೆಂಗ್ಲಾಂಗ್ ಗ್ರಾಮಗಳ ಗಡಿ ಭಾಗಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುಂದಿನ ಆದೇಶದವರೆಗೂ ನಿಷೇಧಾಜ್ಞೆ ಮುಂದುವರಿಯಲಿದೆ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.