ADVERTISEMENT

ಬಿಜೆಪಿಯಿಂದ ಟಿಕೆಟ್ ನಿರಾಕರಣೆ: ಕಾಂಗ್ರೆಸ್ ಸೇರಿದ ದಲಿತ ನಾಯಕ ಉದಿತ್ ರಾಜ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 7:27 IST
Last Updated 24 ಏಪ್ರಿಲ್ 2019, 7:27 IST
   

ನವದೆಹಲಿ:ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನಿರಾಕರಿಸಿದ ಕಾರಣ ದಲಿತ ನಾಯಕ ಉದಿತ್ ರಾಜ್ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.

ಟಿಕೆಟ್ ನಿರಾಕರಿಸಿರುವ ಕಾರಣ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ವಾಯವ್ಯ ದೆಹಲಿಯ ಬಿಜೆಪಿ ಸಂಸದರಾಗಿದ್ದ ಉದಿತ್ ರಾಜ್ ಮಂಗಳವಾರ ಹೇಳಿದ್ದರು.ಲೋಕಸಭಾ ಚುನಾವಣೆಯಲ್ಲಿ ವಾಯವ್ಯ ದೆಹಲಿಯಿಂದ ಸ್ಪರ್ಧಿಸಲು ಪಂಜಾಬಿ ಗಾಯಕ ಹನ್ಸ್ ರಾಜ್ ಹನ್ಸ್ ಅವರ ಹೆಸರನ್ನು ಬಿಜೆಪಿ ಪ್ರಕಟಿಸಿದ ಕೂಡಲೇ ಉದಿತ್ ರಾಜ್ ಕಾಂಗ್ರೆಸ್‍ಗೆ ಸೇರಿದ್ದಾರೆ.

ತನಗೆ ಟಿಕೆಟ್ ನಿರಾಕರಿಸಿರುವಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಲ್ಲಿ ಮಾತನಾಡಲು ಯತ್ನಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ನಿತಿನ್ ಗಡ್ಕರಿ ಮತ್ತು ರಾಜನಾಥ್ ಸಿಂಗ್ ಅವರಲ್ಲಿ ಇದೇ ವಿಷಯ ಹೇಳಿದ್ದರೂ ಕಾದು ನೋಡುವಂತೆ ಹೇಳಿದ್ದರು ಎಂದಿದ್ದಾರೆ ಉದಿತ್ ರಾಜ್.

ADVERTISEMENT

ತಾನು ಪಕ್ಷದ ಟಿಕೆಟ್‌ಗೆ ಕಾಯುತ್ತಿದ್ದು, ಅದು ಸಿಗದೇ ಇದ್ದರೆ ಪಕ್ಷ ಬಿಟ್ಟು ಹೋಗುವುದಾಗಿ ಉದಿತ್ ರಾಜ್ ಮಂಗಳವಾರ ಬೆಳಗ್ಗೆ ಸರಣಿ ಟ್ವೀಟ್ ಮಾಡಿದ್ದರು. ಇದಾದ ನಂತರಮಾಧ್ಯಮದವರೊಂದಿಗೆ ಮಾತನಾಡಿದ ಅವರು ತಮಗೆ ಟಿಕೆಟ್ ನಿರಾಕರಿಸಿರುವುದು ಯಾಕೆ ಎಂದು ಗೊತ್ತಿಲ್ಲ ಎಂದಿದ್ದಾರೆ.

ನಾನು ಪ್ರಧಾನಿ ನರೇಂದ್ರ ಮೋದಿಯವರನಾಯಕತ್ವದಲ್ಲಿ ಭರವಸೆ ಇಟ್ಟು ನನ್ನ ಇಂಡಿಯನ್ ಜಸ್ಟೀಸ್ ಪಾರ್ಟಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದೆ. ಆದರೆ ಹಲವಾರು ಚಿಕ್ಕ ಪ್ರಾದೇಶಿಕ ಪಕ್ಷಗಳು ಸ್ವತಂತ್ರವಾಗಿಯೇ ಇದ್ದು ಲಾಭ ಪಡೆದುಕೊಂಡಿವೆ.ನನಗೆ ತುಂಬಾ ಬೇಸರವಾಗಿದೆ. ನನಗೆ ಹೇಳಬೇಕಾದುದನ್ನು ಹೇಳಲೂ ಅವಕಾಶ ಕೊಡಲಿಲ್ಲ ಎಂದು ಉದಿತ್ ರಾಜ್ ಬೇಸರ ವ್ಯಕ್ತ ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.