ADVERTISEMENT

ದೇಶದ್ರೋಹ ಹೇಳಿಕೆಗೆ ಕಟ್ಟಡ ತೆರವು: ‌ಸುಪ್ರೀಂ ಕೋರ್ಟ್ ನೋಟಿಸ್

ಪಿಟಿಐ
Published 24 ಮಾರ್ಚ್ 2025, 13:30 IST
Last Updated 24 ಮಾರ್ಚ್ 2025, 13:30 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಭಾರತ–ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆ ಭಾರತ ವಿರೋಧಿ ಘೋಷಣೆ ಕೂಗಿದ್ದಕ್ಕಾಗಿ ಎಫ್‌ಐಆರ್‌ ದಾಖಲಿಸಿ, ಕಟ್ಟಡ ತೆರವು ಮಾಡುವ ಮೂಲಕ ನ್ಯಾಯಾಂಗ ನಿಂದನೆಯಾಗಿದೆ ಎಂದು ಕುಟುಂಬವೊಂದು ಸಲ್ಲಿಸಿದ್ದ ಅರ್ಜಿ ಸಂಬಂಧ ಮಹಾರಾಷ್ಟ್ರ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್‌ ಸೋಮವಾರ ನೋಟಿಸ್ ನೀಡಿದೆ.

ಸಿಂಧುದುರ್ಗ್‌ ಜಿಲ್ಲೆಯ ಕಿತಾಬುಲ್ಲಾ ಹಮಿದುಲ್ಲಾ ಖಾನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಅಗಸ್ಟೀನ್‌ ಜಾರ್ಜ್ ಮಸಿಹ್‌ ಅವರ ಪೀಠ ಮಹಾರಾಷ್ಟ್ರ ಅಧಿಕಾರಿಗಳಿಗೆ ಉತ್ತರ ನೀಡುವಂತೆ ಸೂಚಿಸಿ ವಿಚಾರಣೆಯನ್ನು ನಾಲ್ಕು ವಾರ ಕಾಲ ಮುಂದೂಡಿದೆ.

2024ರ ನವೆಂಬರ್‌ 13ರಂದು ಭಾರತ–ಪಾಕಿಸ್ತಾನ ತಂಡಗಳ ನಡುವೆ ನಡೆಯುತ್ತಿದ್ದ ಚಾಂಪಿಯನ್‌ ಟ್ರೋಫಿ ಕ್ರಿಕೆಟ್‌ ಪಂದ್ಯವನ್ನು  ಸ್ನೇಹಿತರೊಬ್ಬರ ಮನೆಯಲ್ಲಿ ಖಾನ್‌ ಕುಟುಂಬ ವೀಕ್ಷಿಸುತ್ತಿತ್ತು. ಈ ವೇಳೆ ಖಾನ್‌ ಅವರ 14 ವರ್ಷದ ಪುತ್ರ ಭಾರತ ವಿರೋಧಿ ಘೋಷಣೆ ಕೂಗಿರುವುದಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಖಾನ್‌ ದಂಪತಿಯನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು.

ADVERTISEMENT

ಆನಂತರ ಮಾಲ್ವಾನ್ ಪುರಸಭೆ ಅಧಿಕಾರಿಗಳು ಖಾನ್ ಅವರ ಗುಜರಿ ಅಂಗಡಿ ಮತ್ತು ಮನೆಯನ್ನು ಅನಧಿಕೃತ ನಿರ್ಮಾಣ ಎಂಬ ಕಾರಣ ನೀಡಿ ತೆರವುಗೊಳಿಸಿದ್ದರು.

ಮಹಾರಾಷ್ಟ್ರ ಅಧಿಕಾರಿಗಳ ಈ ಕ್ರಮವು(ಬುಲ್ಡೋಜರ್‌ ಕಾನೂನು) ಸುಪ್ರೀಂ ಕೋರ್ಟ್‌ ನೀಡಿರುವ ಈ ಹಿಂದಿನ ತೀರ್ಪು ಮತ್ತು ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧವಾಗಿದೆ. ನೋಟಿಸ್‌ ಕೊಟ್ಟು ಉತ್ತರ ಪಡೆಯದೇ, ಆಸ್ತಿ ಹಕ್ಕು ಉಲ್ಲಂಘಿಸಿ ತೆರವು ಮಾಡಲಾಗಿದೆ ವಕೀಲರ ಮೂಲಕ ಖಾನ್‌ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.