ತಿರುವನಂತಪುರಂ:ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗಿಯಾದವರನ್ನು ಕೇರಳ ಪೊಲೀಸರು ಬಂಧಿಸುತ್ತಿದ್ದಾರೆ.ಪ್ರತಿಭಟನೆಯಲ್ಲಿ ಸಾವಿರಕ್ಕಿಂತಲೂ ಹೆಚ್ಚು ಮಂದಿ ಭಾಗಿಯಾಗಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.ಶಬರಿಮಲೆಯಲ್ಲಿ ಸಂಘರ್ಷವನ್ನುಂಟು ಮಾಡಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಪತ್ತೆಹಚ್ಚಿದ್ದು ಈಗಾಗಲೇ 1407 ಮಂದಿಯನ್ನು ಬಂಧಿಸಲಾಗಿದೆ.ಪ್ರತಿಭಟನೆ ವೇಳೆ ಸಂಘರ್ಷವುಂಟು ಮಾಡಿದ 2000ಕ್ಕಿಂತಲೂ ಹೆಚ್ಚು ಮಂದಿಯ ಫೋಟೊವನ್ನು ಪೊಲೀಸರು ಸಂಗ್ರಹಿಸಿದ್ದು, ಆ ವ್ಯಕ್ತಿಗಳನ್ನು ಬಂಧಿಸುವ ಕಾರ್ಯ ನಡೆದು ಬರುತ್ತಿದೆ.
ಫೋಟೊ ಪ್ರಕಟಿಸಿದ ಪೊಲೀಸ್
ಶಬರಿಮಲೆಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಸಂಘರ್ಷಕ್ಕೆ ತಿರುಗುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ವರದಿ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನೆಯ ವಿಡಿಯೊ ಚಿತ್ರೀಕರಣ ಮಾಡಿದ್ದರು.ಇದಕ್ಕೆ ಸುದ್ದಿ ಮಾಧ್ಯಮಗಳ ಸಹಾಯವನ್ನೂ ಪೊಲೀಸರು ಪಡೆದಿದ್ದರು, ಪ್ರತಿಭಟನೆ ವೇಳೆ ಹಿಂಸಾಚಾರ ನಡೆಸಿದ್ದ 220 ವ್ಯಕ್ತಿಗಳ ಫೋಟೊವನ್ನು ಪೊಲೀಸರು ಪ್ರಕಟಿಸಿದ್ದರು.ಇದರಲ್ಲಿ 150 ವ್ಯಕ್ತಿಗಳ ಗುರುತು ಪತ್ತೆಯಾಗಿದ್ದು, ಕೆಲವರನ್ನು ಬಂಧಿಸಲಾಗಿದೆ.
2000 ಮಂದಿಯ ಫೋಟೊಗಳನ್ನು ಸೈಬರ್ ಪೊಲೀಸರು ಸಂಗ್ರಹಿಸಿದ್ದು, ಮೊದಲ ಹಂತದಲ್ಲಿ ಬಿಡುಗಡೆ ಮಾಡಿದ ಫೋಟೊದಲ್ಲಿರುವವರ ಗುರುತು ಪತ್ತೆಯಾದ ನಂತರವೇ ಎರಡನೇ ಹಂತದ ಫೋಟೊ ಪ್ರಕಟಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ತುಲಾ ಮಾಸ ಪೂಜೆಗಾಗಿ ಶಬರಿಮಲೆ ಅಕ್ಟೋಬರ್ 17ರಂದು ಸಂಜೆ ಬಾಗಿಲು ತೆರೆದಿತ್ತು. 16ರಿಂದ ನಿಲಯ್ಕಲ್ನಲ್ಲಿ ಕೆಲವು ಸಂಘಟನೆಗಳು ಪ್ರತಿಭಟನೆ ಆರಂಭಿಸಿದ್ದವು, ಪೊಲೀಸರ ಮೇಲೂ ಪ್ರತಿಭಟನಾಕಾರರು ದಾಳಿ ನಡೆಸಿದ್ದರು. 17ರಂದು ಬೆಳಗ್ಗೆ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಪೊಲೀಸ್ ಲಾಠಿ ಚಾರ್ಜ್ ನಡೆಸಿತ್ತು.ಇದರ ವಿಡಿಯೊ ಚಿತ್ರೀಕರಣ ಜತೆಗೆ ಫೋಟೊಗಳನ್ನು ಪೊಲೀಸರು ಸಂಗ್ರಹಿಸಿದ್ದರು.
ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸರ್ಕಾರದ ಆದೇಶವನ್ನು ಡಿಜಿಪಿ ಲೋಕನಾಥ್ ಬೆಹರಾ ಪತ್ತನಂತಿಟ್ಟ ಪೊಲೀಸ್ ಅಧಿಕಾರಿ ಟಿ. ನಾರಾಯಣ್ ಅವರಿಗೆ ಹಸ್ತಾಂತರ ಮಾಡಿದ ನಂತರ ವಿಡಿಯೊ ಮತ್ತು ಫೋಟೊಗಳ ಮೂಲಕ ಪ್ರತಿಭಟನಾಕಾರರನ್ನು ಪತ್ತೆ ಹಚ್ಚುವ ಕಾರ್ಯ ಆರಂಭವಾಗಿತ್ತು. ಈ ಕಾರ್ಯಕ್ಕಾಗಿ ಪತ್ತನಂತಿಟ್ಟ ಡಿವೈಎಸ್ಪಿ ಮತ್ತು ಸ್ಪೆಷಲ್ ಬ್ರಾಂಚ್ ಡಿವೈಎಸ್ಪಿ ಅವರ ನೆರವು ಪಡೆಯಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.