ತಿರುವನಂತಪುರ: ಶಬರಿಮಲೆಯ ಪವಿತ್ರ 18 ಮೆಟ್ಟಿಲುಗಳ ಸಮೀಪಕ್ಕೆ ಮಹಿಳೆಯೊಬ್ಬರು ತಲುಪಿದ ಹಿನ್ನೆಲೆಯಲ್ಲಿ ಪತ್ತನಂತಿಟ್ಟ ಬಳಿ ಮಂಗಳವಾರ ಪ್ರತಿಭಟನೆಗಳು ತೀವ್ರಗೊಂಡಿವೆ.
ದೇಗುಲ ಸಮೀಪಕ್ಕೆ ಬಂದಿದ್ದ ಲಲಿತಾ ಅವರಿಗೆ 50 ವರ್ಷಗಳಾಗಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದರು. ಆಧಾರ್ ಕಾರ್ಡ್ ತೋರಿಸುವಂತೆ ಒತ್ತಾಯಿಸಿದರು. ಮಹಿಳೆಯ ವಯಸ್ಸು 52 ವರ್ಷ ಎಂದು ತಿಳಿದ ನಂತರ ಆಕೆಗೆ ದರ್ಶನಕ್ಕೆ ಅವಕಾಶ ನೀಡಲಾಯಿತು.
ಮಹಿಳೆಯ ವಯಸ್ಸು 50 ವರ್ಷ ದಾಟಿದೆ ಎಂದು ಅರಿವಾದ ನಂತರ ಕ್ಷಮೆಯಾಚಿಸಿದ ಪ್ರತಿಭಟನಾನಿರತರು ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು. ಈ ಸಂದರ್ಭ ಅಮೃತಾ ಟಿವಿ ಚಾನೆಲ್ನ ಕ್ಯಾಮೆರಾಮನ್ ಗಾಯಗೊಂಡರು. ಶಬರಿಮಲೆ ದೇಗುಲವನ್ನು ಸೋಮವಾರ ಒಂದು ದಿನದ ಪೂಜಾ ವಿಧಿಗಾಗಿ ತೆರೆಯಲಾಗಿದೆ. ಸಾವಿರಾರು ಪೊಲೀಸರು, ಮಹಿಳಾ ಅಧಿಕಾರಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಅವಕಾಶ ನೀಡಬೇಕು ಎಂದುಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಕೇರಳದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ.
ಶ್ರೀ ಚಿತಿರಾ ಅಟ್ಟತಿರುನಾಳ್ ಪೂಜೆಗಾಗಿ ದೇಗುಲವನ್ನು ಸೋಮವಾರ ತೆರೆಯಲಾಗಿದೆ. ತಿರುವಾಂಕೂರು ಸಂಸ್ಥಾನದ ಶ್ರೀ ಚಿತಿರಾ ತಿರುನಾಳ್ ಬಲರಾಮ ವರ್ಮಾ ಅವರ ಗೌರವಾರ್ಥ ಈ ಪೂಜೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.