ADVERTISEMENT

ದರೋಡೆಕೋರ ಅನ್ಸಾರಿಗೆ ಪಂಜಾಬ್‌ ರಕ್ಷಣೆ: ಉತ್ತರಪ್ರದೇಶ ಸರ್ಕಾರ

ಸುಪ್ರೀಂಕೋರ್ಟ್‌ನಲ್ಲಿ ಉತ್ತರಪ್ರದೇಶ ಸರ್ಕಾರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 13:50 IST
Last Updated 24 ಫೆಬ್ರುವರಿ 2021, 13:50 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ದರೋಡೆಕೋರ ಮುಖ್ತಾರ್‌ ಅನ್ಸಾರಿಯನ್ನು ಪಂಜಾಬ್‌ ಸರ್ಕಾರ ನಾಚಿಕೆಬಿಟ್ಟು ರಕ್ಷಣೆ ಮಾಡುತ್ತಿದೆ ಎಂದು ಉತ್ತರಪ್ರದೇಶ ಸರ್ಕಾರ ಆರೋಪಿಸಿದೆ.

ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಅನ್ಸಾರಿ ವಿಶೇಷ ನ್ಯಾಯಾಲಯದ ಮುಂದೆ ಖುದ್ದು ವಿಚಾರಣೆಗೆ ಹಾಜರಾಗುವುದನ್ನು ಪಂಜಾಬ್‌ ರಾಜ್ಯ ಸರ್ಕಾರ ತಪ್ಪಿಸುತ್ತಿದೆ ಎಂದು ಉತ್ತರಪ್ರದೇಶ ಸರ್ಕಾರವು ಬುಧವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಬಿಎಸ್‌ಪಿಯ ಶಾಸಕ ಆಗಿರುವ ಅನ್ಸಾರಿಯನ್ನು 2019ರ ಜನವರಿಯಲ್ಲಿ ನಡೆದ ಸುಲಿಗೆ ಪ್ರಕರಣ ಸಂಬಂಧ ಬಂಧಿಸಿ, ರೂಪಾನಗರದ ಜೈಲಿನಲ್ಲಿಡಲಾಗಿದೆ.

ADVERTISEMENT

ಉತ್ತರಪ್ರದೇಶ ಸರ್ಕಾರದ ‍ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ಪೀಠದ ಎದುರು ಪಂಜಾಬ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅನ್ಸಾರಿ ವಿರುದ್ಧ 30ಕ್ಕೂ ಹೆಚ್ಚು ಎಫ್‌ಐಆರ್‌ ದಾಖಲಾಗಿದ್ದು, 14ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಅಲ್ಲದೆ, ಕೊಲೆ ಮತ್ತು ದರೋಡೆ ಸಂಬಂಧಿತ ಪ್ರಕರಣಗಳು ಜನಪ್ರತಿನಿಧಿಗಳ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇದ್ದು, ಅನ್ಸಾರಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕಿದೆ ಎಂದು ಉತ್ತರಪ್ರದೇಶ ಸರ್ಕಾರ ಹೇಳಿದೆ.

ಪಂಜಾಬ್ ಸರ್ಕಾರವನ್ನು ಪ್ರತಿನಿಧಿಸುವ ಹಿರಿಯ ವಕೀಲ ದುಶ್ಯಂತ್ ದವೆ ಅವರು ವೈಯಕ್ತಿಕ ಕಾರಣ ನೀಡಿ, ವಿಚಾರಣೆ ಮುಂದೂಡಲು ಕೋರಿದ್ದರಿಂದ ಸುಪ್ರೀಂಕೋರ್ಟ್‌ ಈ ಪ್ರಕರಣದ ವಿಚಾರಣೆಯನ್ನು ಮಾರ್ಚ್ 2ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.