ADVERTISEMENT

ಪಂಜಾಬ್‌: ಅಮರಿಂದರ್‌ ಸಿಂಗ್‌ ನೇತೃತ್ವದಲ್ಲೇ ಮುಂದಿನ ಚುನಾವಣೆ

ಎಐಸಿಸಿ ಉಸ್ತುವಾರಿ ಹರೀಶ್‌ ರಾವತ್‌ ಘೋಷಣೆ

ಪಿಟಿಐ
Published 25 ಆಗಸ್ಟ್ 2021, 15:55 IST
Last Updated 25 ಆಗಸ್ಟ್ 2021, 15:55 IST
ಹರೀಶ್‌ ರಾವತ್‌
ಹರೀಶ್‌ ರಾವತ್‌   

ಚಂಡೀಗಡ: ಪಂಜಾಬ್‌ ವಿಧಾನಸಭೆಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಯನ್ನು ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರ ನೇತೃತ್ವದಲ್ಲಿಯೇ ಎದುರಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಂಜಾಬ್‌ ಉಸ್ತುವಾರಿ ಹರೀಶ್‌ ರಾವತ್‌ ಬುಧವಾರ ಹೇಳಿದ್ದಾರೆ.

ಆ ಮೂಲಕ ಅವರು, ಮುಖ್ಯಮಂತ್ರಿ ವಿರುದ್ಧ ಬಂಡಾಯ ಎದ್ದಿರುವ ಹಾಗೂ ಅವರನ್ನು ಆ ಸ್ಥಾನದಿಂದ ಇಳಿಸಲು ಪ್ರಯತ್ನಿಸುತ್ತಿರುವ ಕೆಲ ಶಾಸಕರು ಹಾಗೂ ಸಚಿವರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಸಚಿವರಾದ ತೃಪ್ತ್ ರಾಜೀಂದರ್‌ ಸಿಂಗ್‌ ಬಜ್ವಾ, ಸುಖ್ಬಿಂದರ್ ಸಿಂಗ್‌ ಸರ್ಕಾರಿಯಾ, ಸುಖ್ಜಿಂದರ್‌ಸಿಂಗ್ ರಂಧಾವಾ, ಚರಣ್‌ಜಿತ್‌ ಸಿಂಗ್‌ ಚನ್ನಿ ಹಾಗೂ ಕೆಲ ಶಾಸಕರು ಡೆಹ್ರಾಡೂನ್‌ನಲ್ಲಿ ಹರೀಶ್‌ ರಾವತ್‌ ಅವರನ್ನು ಭೇಟಿ ಮಾಡಿದ ನಂತರ ಈ ಹೇಳಿಕೆ ಹೊರಬಿದ್ದಿದೆ. ಇದು ಬಂಡಾಯ ಶಾಸಕರಿಗೆ ಆಗಿರುವ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್‌, ‘ಅಮರಿಂದರ್‌ ಸಿಂಗ್‌ ನೇತೃತ್ವದ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ. ಅವರು ತಮ್ಮ ಅಧಿಕಾರಾವಧಿ ಪೂರ್ಣಗೊಳಿಸುವರು. ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯಲ್ಲೂ ಪಕ್ಷದ ಗೆಲುವಿನ ಮೇಲೆಯೂ ಈ ಬೆಳವಣಿಗೆ ಪರಿಣಾಮ ಬೀರುವುದಿಲ್ಲ’ ಎಂದರು.

ಈ ನಾಲ್ವರು ಸಚಿವರು ಹಾಗೂ 25ಕ್ಕೂ ಅಧಿಕ ಬಂಡಾಯ ಶಾಸಕರು ಮಂಗಳವಾರ ಸಭೆ ನಡೆಸಿದ್ದರು. ಹಲವಾರು ಭರವಸೆಗಳನ್ನು ಈಡೇರಿಸುವಲ್ಲಿ ಮುಖ್ಯಮಂತ್ರಿ ವಿಫಲರಾಗಿದ್ದು, ಅವರಲ್ಲಿ ತಾವು ವಿಶ್ವಾಸ ಕಳೆದುಕೊಂಡಿದ್ದಾಗಿ ಶಾಸಕರು ಸಭೆಯಲ್ಲಿ ಹೇಳಿದ್ದರು. ಕೂಡಲೇ ಮುಖ್ಯಮಂತ್ರಿಯನ್ನು ಬದಲಾಯಿಸಬೇಕು ಎಂಬ ಬೇಡಿಕೆಯನ್ನು ವರಿಷ್ಠರ ಮುಂದಿಡಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.