ADVERTISEMENT

ದೆಹಲಿ ಹಿಂಸಾಚಾರ: ರೈತ ನಾಯಕ ಸೇರಿ ಮತ್ತಿಬ್ಬರ ಬಂಧನ

ಪಿಟಿಐ
Published 23 ಫೆಬ್ರುವರಿ 2021, 5:44 IST
Last Updated 23 ಫೆಬ್ರುವರಿ 2021, 5:44 IST
 ಸಾಂದರ್ಭಿಕ ಚಿತ್ರ
 ಸಾಂದರ್ಭಿಕ ಚಿತ್ರ   

ಜಮ್ಮು/ನವದೆಹಲಿ‌: ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಮುಖ ರೈತ ನಾಯಕ ಸೇರಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಜಮ್ಮು ನಗರದ ಛಾಠಾ ಪ್ರದೇಶದ ನಿವಾಸಿ ಜಮ್ಮು ಮತ್ತು ಕಾಶ್ಮೀರ ಸಂಯುಕ್ತ ಕಿಸಾನ್‌ ರಂಗದ ಅಧ್ಯಕ್ಷ ಮೊಹಿಂದರ್ ಸಿಂಗ್‌(45) ಮತ್ತು ಜಮ್ಮುವಿನ ಗೋಲೆ ಗುರ್ಜಾಲ್ ನಿವಾಸಿ ಮನ್‌ದೀಪ್‌ ಸಿಂಗ್‌(23) ಬಂಧಿತರು.

‘ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರೂ ಪ‍್ರಮುಖ ಸಂಚುಕೋರರಾಗಿದ್ದಾರೆ‘ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ADVERTISEMENT

ದೆಹಲಿ ಅಪರಾಧ ವಿಭಾಗದ ಪೊಲೀಸರು, ಜಮ್ಮು ಕಾಶ್ಮೀರ ಪೊಲೀಸರ ನೆರವಿನೊಂದಿಗೆ ಈ ಇಬ್ಬರು ಆರೋಪಿಗಳನ್ನು ಸೋಮವಾರ ರಾತ್ರಿ ಜಮ್ಮುವಿನಲ್ಲಿ ಬಂಧಿಸಿದ್ದಾರೆ. ಇವರನ್ನು ದೆಹಲಿಗೆ ಸ್ಥಳಾಂತರಿಸಲಾಗಿದೆ.

‘ಮೊಹಿಂದರ್ ಸಿಂಗ್‌ ನಿರಾಪರಾಧಿ. ಅವರದ್ದೇನೂ ತಪ್ಪಿಲ್ಲ. ಅವರನ್ನು ಬಿಡುಗಡೆ ಮಾಡಿ‘ ಎಂದು ಕುಟುಂಬದವರು ಒತ್ತಾಯಿಸಿದರು. ಹಿಂಸಾಚಾರ ನಡೆದಾಗ ದೆಹಲಿ ಗಡಿಯಲ್ಲಿದ್ದರು, ಕೆಂಪು ಕೋಟೆಯಲ್ಲಿ ಅಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.