ADVERTISEMENT

ರಾಹುಲ್ ಗಾಂಧಿ ‘ಯೋಧ’ ಎಂದು ಬಣ್ಣಿಸಿದ ಪ್ರಿಯಾಂಕಾ ವಾದ್ರಾ

ಪಿಟಿಐ
Published 3 ಜನವರಿ 2023, 9:55 IST
Last Updated 3 ಜನವರಿ 2023, 9:55 IST
   

ಗಾಜಿಯಾಬಾದ್: ಸಹೋದರ ರಾಹುಲ್ ಗಾಂಧಿಯನ್ನು "ಯೋಧ" ಎಂದು ಬಣ್ಣಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಪ್ರತಿಷ್ಠೆಯನ್ನು ನಾಶಮಾಡಲು ಸಾವಿರಾರು ಕೋಟಿ ಖರ್ಚು ಮಾಡುತ್ತಿರುವ ಬಿಜೆಪಿ ಸರ್ಕಾರದ ಶಕ್ತಿಗೆ ರಾಹುಲ್‌ ಹೆದರುವುದಿಲ್ಲ ಎಂದು ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆ ದೆಹಲಿಯಿಂದ ಉತ್ತರ ಪ್ರದೇಶ ಪ್ರವೇಶಿಸಿದ್ದು, ಲೋನಿ ಗಡಿಯಲ್ಲಿ ಪ್ರಿಯಾಂಕ ಯಾತ್ರೆಯನ್ನು ಬರಮಾಡಿಕೊಂಡರು. ಬಳಿಕ ಮಾತನಾಡಿ, ದೇಶದಲ್ಲಿ ಅದಾನಿ ಮತ್ತು ಅಂಬಾನಿಯಂತಹ ದೊಡ್ಡ ಕೈಗಾರಿಕೋದ್ಯಮಿಗಳು ಅನೇಕ ರಾಜಕಾರಣಿಗಳು, ಸರ್ಕಾರಿ ಸಂಸ್ಥೆಗಳು ಮತ್ತು ಮಾಧ್ಯಮಗಳನ್ನು ಖರೀದಿಸಿರಬಹುದು. ಆದರೆ ತಮ್ಮ ಸಹೋದರನನ್ನುಎಂದಿಗೂ ಖರೀದಿಸಲು ಸಾಧ್ಯವಿಲ್ಲ ಎಂದರು.

ದೆಹಲಿಯ ವಿಪರೀತ ಚಳಿ ನಡುವೆಯೂ ಯಾತ್ರೆಯಲ್ಲಿ ರಾಹುಲ್‌ ಬಿಳಿ ಟೀ ಶರ್ಟ್ ಧರಿಸಿದ್ದರು. ರಾಹುಲ್‌ಗೆ ಚಳಿಯಾಗುತ್ತಿಲ್ಲವೇ ಎಂದು ಮಾಧ್ಯಮಗಳು ಮತ್ತು ರಾಜಕಾರಣಿಗಳು ವ್ಯಂಗ್ಯವಾಡಿದ್ದವು. ಇದಕ್ಕೆ ಪ್ರತಿಕ್ರಿಯಿಸಿ, ಚಳಿಗಾಲದಲ್ಲೂ ರಾಹುಲ್ ಗಾಂಧಿಗೆ ಚಳಿಯಾಗುತ್ತಿಲ್ಲ ಎಂದು ಜನ ಹೇಳುತ್ತಾರೆ, ಸತ್ಯದ ಪರವಾಗಿ ಹೋರಾಡುತ್ತಿರುವುದೇ ಇದಕ್ಕೆ ಕಾರಣ ಎಂದು ಕಾಂಗ್ರೆಸ್ ನಾಯಕಿ ಹೇಳಿದರು.

ADVERTISEMENT

ಕನ್ಯಾಕುಮಾರಿಯಿಂದ 3,000 ಕಿ.ಮೀ ಕ್ರಮಿಸಿ ಉತ್ತರ ಪ್ರದೇಶ ಪ್ರವೇಶಿಸಿರುವ ಯಾತ್ರೆಯನ್ನು ಸ್ವಾಗತಿಸಲು ಹೆಮ್ಮೆಯಾಗುತ್ತಿದೆ ಎಂದು ಪ್ರಿಯಾಂಕಾ ಹೇಳಿದರು.

ತಮ್ಮ ಸಹೋದರನ ಘನತೆಗೆ ಧಕ್ಕೆ ತರಲು ಸರ್ಕಾರ ಸಾವಿರಾರು ಕೋಟಿಗಳನ್ನು ಖರ್ಚು ಮಾಡಿದೆ. ಏಜೆನ್ಸಿಗಳನ್ನು ನಿಯೋಜಿಸಿದೆ. ಆದರೆ ಆತ ಯೋಧನಾಗಿರುವುದರಿಂದ ಭಯಪಡಲಿಲ್ಲ. ಎಲ್ಲವನ್ನು ಮೀರಿ ಮುನ್ನುಗುತ್ತಿದ್ದಾರೆ ಎಂದು ಪ್ರಿಯಾಂಕ ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.