ಬೊರ್ಗಾವ್, ಮಧ್ಯಪ್ರದೇಶ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ ಯಾತ್ರೆ’ಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಪತಿ ಮತ್ತು ಮಗನ ಜೊತೆ ಗುರುವಾರ ಪಾಲ್ಗೊಂಡರು.
ಪ್ರಿಯಾಂಕಾ ಅವರು ಇದೇ ಪ್ರಥಮ ಬಾರಿಗೆ ಈ ಪಾದಯಾತ್ರೆಯಲ್ಲಿ ರಾಹುಲ್ ಜತೆಯಾಗಿದ್ದಾರೆ.ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಈ ಯಾತ್ರೆ ಆರಂಭವಾಗಿದೆ. ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಕೂಡಾ ಪ್ರಿಯಾಂಕಾ ಜೊತೆ ಹೆಜ್ಜೆ ಹಾಕಿದರು.
ಮಧ್ಯಪ್ರದೇಶದಲ್ಲಿ ಎರಡನೇ ದಿನದ ಯಾತ್ರೆಯು ಖಾಂಡ್ವಾ ಜಿಲ್ಲೆಯ ಬೊರ್ಗಾವ್ನಿಂದ ಆರಂಭವಾಯಿತು. ಕಾಂಗ್ರೆಸ್ ಬೆಂಬಲಿಗರು ಪ್ರಿಯಾಂಕಾ ಮತ್ತು ರಾಹುಲ್ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು. ಬೆಂಬಲಿಗರು ಅವರಿಬ್ಬರನ್ನು ಮುತ್ತಿಕೊಳ್ಳದಂತೆ ತಡೆಯಲು ಪೊಲೀಸರು ಹರಸಾಹಸ ಪಟ್ಟರು.
ಇಲ್ಲಿಯ ಗ್ರಾಮವೊಂದರಲ್ಲಿ ಯಾತ್ರೆ ಸಾಗುತ್ತಿದ್ದ ವೇಳೆ ರಾಹುಲ್ ಅವರನ್ನು ಭೇಟಿಯಾದ 63 ವರ್ಷ ವಯಸ್ಸಿನ ವೃದ್ಧೆಯೊಬ್ಬರು, ‘ಮುಂಬರಲಿರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಬೇಕೆಂದರೆ ರಾಜ್ಯದ ರೈತರ ಸಾಲ ಮನ್ನಾ ಮಾಡುವ ಘೋಷಣೆ ಮಾಡಿ’ ಎಂದು ಸಲಹೆ ನೀಡಿದರು. ಜೊತೆಗೆ, ಅಡುಗೆ ಅನಿಲ ಮತ್ತು ರಾಸಾಯನಿಕ ಗೊಬ್ಬರಗಳ ಬೆಲೆ ಇಳಿಸುವುದಕ್ಕೆ ಪ್ರಯತ್ನಿಸುವಂತೆ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.