ADVERTISEMENT

ಸಂವಿಧಾನದ 15 ಮತ್ತು 25ನೇ ವಿಧಿಗಳನ್ನು ಮಾರಾಟ ಮಾಡಲಾಗಿದೆಯೇ?: ರಾಹುಲ್ ಗಾಂಧಿ

ಪಿಟಿಐ
Published 30 ಆಗಸ್ಟ್ 2021, 16:44 IST
Last Updated 30 ಆಗಸ್ಟ್ 2021, 16:44 IST
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ   

ನವದೆಹಲಿ: ಬುಡಕಟ್ಟು ವ್ಯಕ್ತಿಯೊಬ್ಬನನ್ನು ವಾಹನಕ್ಕೆ ಕಟ್ಟಿಹಾಕಿ ಎಳೆದಿರುವ ಘಟನೆ ಹಾಗೂ ಇತರ ಕೆಲವು ಇತ್ತೀಚಿನ ಗುಂಪು ಹಿಂಸಾಚಾರದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಸಂವಿಧಾನದ 15 ಮತ್ತು 25 ನೇ ವಿಧಿಗಳನ್ನು ಮಾರಾಟ ಮಾಡಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ವಿಡಿಯೊ ಕೊಲಾಜ್ ಅನ್ನು ಹಂಚಿಕೊಂಡಿದ್ದಾರೆ. ಈ ಕ್ಲಿಪ್‌ನಲ್ಲಿ ಮಧ್ಯಪ್ರದೇಶದ ನೀಮಚ್ ಜಿಲ್ಲೆಯಲ್ಲಿ 40 ವರ್ಷದ ಬುಡಕಟ್ಟು ವ್ಯಕ್ತಿಯೊಬ್ಬನನ್ನು ಎಂಟು ಜನರು ಥಳಿಸಿದ್ದು, ವಾಹನದ ಹಿಂಭಾಗಕ್ಕೆ ಕಟ್ಟಿ ಸ್ವಲ್ಪ ದೂರ ಎಳೆದಿದ್ದಾರೆ. ಕಳೆದ ವಾರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆ ವ್ಯಕ್ತಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಗ್ರಾಮವೊಂದರಲ್ಲಿ ಭಾನುವಾರ ಗುಜರಿ ವ್ಯಾಪಾರಿಯಾಗಿರುವ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಬೆದರಿಕೆಯೊಡ್ಡಿದ ವಿಡಿಯೊವನ್ನು ಕೂಡ ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ.

ADVERTISEMENT

ಈ ವಿಚಾರವಾಗಿ ಪ್ರಶ್ನಿಸಿರುವ ರಾಹುಲ್ ಗಾಂಧಿ, 'ಸಂವಿಧಾನದ 15 ಮತ್ತು 25ನೇ ವಿಧಿಗಳನ್ನು ಸಹ ಮಾರಾಟ ಮಾಡಲಾಗಿದೆಯೇ? ಎಂದಿದ್ದಾರೆ.

ಸಂವಿಧಾನದ 15 ನೇ ಪರಿಚ್ಛೇದವು ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳ ಅಥವಾ ಇತರೆ ವಿಚಾರಗಳ ಆಧಾರದ ಮೇಲೆ ಯಾವುದೇ ಪ್ರಜೆಯ ವಿರುದ್ಧ ತಾರತಮ್ಯ ಮಾಡಬಾರದು ಎಂದು ಹೇಳುತ್ತದೆ. ಆದರೆ 25 ನೇ ವಿಧಿಯು ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಮುಕ್ತ ವೃತ್ತಿ, ಅಭ್ಯಾಸ ಮತ್ತು ಧರ್ಮದ ಪ್ರಚಾರದ ಬಗ್ಗೆ ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.