ನವದೆಹಲಿ: ಸಾರ್ವಜನಿಕ ಸಾರಿಗೆಗಾಗಿ ಜನರು ಸುದೀರ್ಘ ಸಮಯ ಸರತಿ ಸಾಲುಗಳಲ್ಲಿ ನಿಲ್ಲುತ್ತಿರುವುದು ಕೇವಲ ಕೋವಿಡ್ ನಿರ್ಬಂಧಗಳಿಂದಲ್ಲ, ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಪರಿಣಾಮ ಎಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯ ಮೆಟ್ರೋ ನಿಲ್ದಾಣಗಳಲ್ಲಿ ರೈಲಿಗಾಗಿ ಪ್ರಯಾಣಿಕರು ಸರತಿ ಸಾಲಿನಲ್ಲಿ ಕಾಯುತ್ತಿರುವ ಬಗ್ಗೆ ವರದಿಗಳು ಬಂದ ಬಳಿಕ ರಾಹುಲ್ ಗಾಂದಿ, ಈ ಬಗ್ಗೆ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದ್ದಾರೆ. ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಕಾಯುವ ಸಮಯ ಸುಮಾರು ಒಂದು ಗಂಟೆಯವರೆಗೆ ಏರಿದೆ.
‘ಸಾರ್ವಜನಿಕ ಸಾರಿಗೆಗಾಗಿ ಜನರ ದೀರ್ಘ ಸರತಿ ಸಾಲುಗಳು ಕೇವಲ ಕೋವಿಡ್ ನಿರ್ಬಂಧಗಳಿಂದಾಗಿಲ್ಲ. ನಿಜವಾದ ಕಾರಣವನ್ನು ಕಂಡುಹಿಡಿಯಲು ನಿಮ್ಮ ನಗರದಲ್ಲಿ ಪೆಟ್ರೋಲ್-ಡೀಸೆಲ್ ದರಗಳನ್ನು ನೋಡಿ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಿರುವ ಹೆಚ್ಚಿನ ತೆರಿಗೆಗಳನ್ನು ಖಂಡಿಸಿ ಸರ್ಕಾರದವಿರುದ್ಧವಾಗ್ದಾಳಿ ನಡೆಸಿರುವ ಅವರು, #TaxExtortion ಎಂಬ ಹ್ಯಾಶ್ಟ್ಯಾಗ್ ಅನ್ನು ಬಳಸಿದ್ದಾರೆ.
ಅಬಕಾರಿ ಸುಂಕ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಗಳ ಮೂಲಕ ಸರ್ಕಾರ ನೂರಾರು ಕೋಟಿ ವಸೂಲಿ ಮಾಡುತ್ತಿದೆ. ಇದರಿಂದಾಗಿ ಇಂಧನ ಬೆಲೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ದೇಶದ ಹಲವಾರು ಕಡೆಗಳಲ್ಲಿ ಪ್ರತಿ ಲೀಟರ್ಗೆ ಪೆಟ್ರೋಲ್ ಬೆಲೆ ₹ 100ರ ಗಡಿ ದಾಟಿದೆ ಎಂದು ಎಂದು ಕಾಂಗ್ರೆಸ್ ಆರೋಪಿಸುತ್ತಲೇ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.