ನವದೆಹಲಿ: ನಿರ್ಮಲಾ ಸೀತಾರಾಮನ್ ಅವರು ತಾವು ಈರುಳ್ಳಿ ತಿನ್ನುವುದಿಲ್ಲ ಎಂದಿರುವುದು ದುರಹಂಕಾರದ ಮಾತು.ತಮ್ಮ ಸುತ್ತ ಏನಾಗುತ್ತಿದೆ ಎಂಬುದರ ಅರಿವೇ ಇಲ್ಲದ ರೀತಿಯಲ್ಲಿ ಹಣಕಾಸು ಸಚಿವರು ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟೀಕಿಸಿದ್ದಾರೆ.
‘ಕೆಫೆ ನಿರ್ಮಲಾ ತಾಯ್: ದುರಹಂಕಾರ, ಸ್ವಲ್ಪ ಅಜ್ಞಾನ ಮತ್ತು ರಾಶಿ–ರಾಶಿ ಅಸಮರ್ಥತತೆಯನ್ನು ಬಳಸಿ ಸಿದ್ಧಪಡಿಸಲಾದ ತಿನಿಸುಗಳು ಇಲ್ಲಿ ದೊರೆಯುತ್ತವೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ನಿರ್ಮಲಾ ಅವರನ್ನು, ‘ಭಾರತದ ಮೇರಿ ಆಂಟೊನೆಟ್’ ಎಂದು ಕರೆದಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲೂ ನಿರ್ಮಲಾ ಅವರನ್ನು ‘ಭಾರತದ ಮೇರಿ ಆಂಟೊನೆಟ್’ ಎಂದು ಲೇವಡಿ ಮಾಡಲಾಗುತ್ತಿದೆ.ಟ್ವಿಟರ್ನಲ್ಲಿ#SayItLikeNirmalaTai ಹ್ಯಾಷ್ಟ್ಯಾಗ್ ಗುರುವಾರ ಟ್ರೆಂಡ್ ಆಗಿದೆ.
1789ರಲ್ಲಿ ಫ್ರಾನ್ಸ್ನ ಜನರಿಗೆ ತಿನ್ನಲು ಬ್ರೆಡ್ ಇಲ್ಲ ಎಂದು ಅಧಿಕಾರಿಗಳು ತಿಳಿಸಿದಾಗ ರಾಣಿ ಮೇರಿ ಆಂಟೊನೆಟ್, ‘ಜನರು ಕೇಕ್ ತಿನ್ನಲಿ’ ಎಂದು ಹೇಳಿದ್ದಳು. ಜನರ ಪರಿಸ್ಥಿತಿಯ ಅರಿವು ಇಲ್ಲದೇ ಹೇಳಿಕೆ ನೀಡಿದವರನ್ನು ಟೀಕಿಸಲು ‘ಮೇರಿ ಆಂಟೊನೆಟ್’ ಎಂಬ ಮಾತನ್ನು ಬಳಸಲಾಗುತ್ತದೆ.
***
ಈರುಳ್ಳಿ ಖರೀದಿಸಲು ಹೆಣಗಾಡುತ್ತಿರುವ ಬಡಜನರ ಕಣ್ಣೀರನ್ನು, ‘ನಾನು ಈರುಳ್ಳಿ ತಿನ್ನುವುದಿಲ್ಲ’ ಎನ್ನುವ ಮೂಲಕ ಹಣಕಾಸು ಸಚಿವರು ಅಣಕಿಸುತ್ತಿದ್ದಾರೆ
- ರಾಘವ್ ಛಡ್ಡಾ, ಎಎಪಿ ನಾಯಕ
***
ನಾನು ಪಕ್ಕಾ ಸಸ್ಯಾಹಾರಿ. ನಾನು ಈವರೆಗೂ ಈರುಳ್ಳಿಯ ರುಚಿ ನೋಡಿಯೇ ಇಲ್ಲ. ಈರುಳ್ಳಿ ಬೆಲೆ ಏರಿಕೆ ಆಗಿರುವುದು ನನಗೆ ಹೇಗೆ ಗೊತ್ತಾಗುತ್ತದೆ
- ಅಶ್ವಿನಿ ಚೌಬೆ, ಕೇಂದ್ರ ಸಚಿವ
ಆಧಾರ: ಪಿಟಿಐ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.