
ಪಟ್ನಾ: ‘ಉದ್ಯೋಗ ಮತ್ತು ಅಭಿವೃದ್ಧಿಯ ಕುರಿತು ಟೊಳ್ಳು ಭರವಸೆಗಳನ್ನು ನೀಡಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಯುವಕರಿಗೆ ಮೋಸ ಮಾಡಿದ್ದಾರೆ. ಬಿಹಾರದ ಜನರಿಗೆ ಶಿಕ್ಷಣ ಬೇಕು. ವಲಸೆ ತಡೆಯಲು ಉದ್ಯೋಗವೂ ಬೇಕು’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸ್ವಕ್ಷೇತ್ರವಾದ ನಳಂದದಲ್ಲಿ ರಾಹುಲ್ ಗುರುವಾರ ಪ್ರಚಾರ ನಡೆಸಿದರು.
‘ನಳಂದಲ್ಲಿ ನಾವು ವಿಶ್ವ ದರ್ಜೆಯ ವಿಶ್ವವಿದ್ಯಾಲಯವನ್ನು ನೀಡುತ್ತೇವೆ. ಇದು ಎಲ್ಲರಿಗೂ ಮಾದರಿ ಆಗುವಂತಿರುತ್ತದೆ. ಗತಕಾಲದಲ್ಲಿ ಜಪಾನ್, ಚೀನಾ ಮತ್ತು ಯುರೋಪ್ಗಳಿಂದ ವಿದ್ಯಾರ್ಥಿಗಳು ನಳಂದ ವಿಶ್ವವಿದ್ಯಾಲಯಕ್ಕೆ ಬರುತ್ತಿದ್ದರು. ನಾವು ಮತ್ತೊಮ್ಮೆ ಬಿಹಾರವನ್ನು ಶೈಕ್ಷಣಿಕ ಕೇಂದ್ರವನ್ನಾಗಿ ಮಾಡುತ್ತೇವೆ’ ಎಂದರು.
‘ಬಿಹಾರಕ್ಕೆ ಪ್ರಶ್ನೆಪತ್ರಿಕೆ ಸೋರಿಕೆ ಎನ್ನುವ ಅನ್ವರ್ಥ ಅಂಟಿಕೊಂಡಿದೆ. ಪ್ರಶ್ನೆಪತ್ರಿಕೆಗಳು ಪದೇ ಪದೇ ಸೋರಿಕೆಯಾಗುತ್ತಲೇ ಇವೆ. ಇದು ಬಿಹಾರದ ಯುವಕರ ಭವಿಷ್ಯವನ್ನು ಹಾಳು ಮಾಡಿದೆ. ಈ ಕಾರಣಕ್ಕಾಗಿಯೇ ಇಲ್ಲಿನ ಯುವಕರು ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ‘ಇಂಡಿಯಾ’ ಕೂಟವು ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ, ವಲಸೆ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ದೂರಿದರು.
ರಾಹುಲ್ ಹೇಳಿದ್ದು...
ನಿತೀಶ್ ಅವರ ಆಡಳಿತವು ಸತ್ತು ಹೋಗಿದೆ. ನರೇಂದ್ರ ಮೋದಿ ಅಮಿತ್ ಶಾ ಮತ್ತು ನಾಗ್ಪುರವು ಬಿಹಾರವನ್ನು ನಡೆಸುತ್ತಿದ್ದಾರೆ ಎಂದು ನನಗೆ ಯಾರೋ ಹೇಳಿದರು
ಮತಗಳ್ಳತನ ಮಾಡುವವರ ಬಗ್ಗೆ ಎಚ್ಚರಿಕೆಯಿಂದ ಇರಿ. ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಮತಗಳ್ಳತನ ಮಾಡಿದವರೇ ಬಿಹಾರದಲ್ಲಿಯೂ ಮಾಡಲ ಯತ್ನಿಸುತ್ತಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.