ತಿರುನೆಲ್ವೇಲಿ, ತಮಿಳುನಾಡು: ‘ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆಸುವ ನೀಟ್ ಪರೀಕ್ಷೆ, ಬಡವರ ವಿರೋಧಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದರು.
ತಿರುನೆಲ್ವೇಲಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡ ಅವರು, ‘ತಮಿಳುನಾಡಿನಲ್ಲಿ ನೀಟ್ ದೊಡ್ಡ ಚರ್ಚಾ ವಿಷಯವಾಗಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನೀಟ್ ಪರೀಕ್ಷೆ ಬೇಕೆ, ಬೇಡವೆ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ನಾವು ರಾಜ್ಯಗಳಿಗೆ ನೀಡುತ್ತೇವೆ’ ಎಂದರು.
ತಮಿಳರ ಜತೆ ಇದ್ದೇವೆ: ‘ಈಗ ನಡೆಯುತ್ತಿರುವ ಚುನಾವಣೆ ಸೈದ್ಧಾಂತಿಕ ಹೋರಾಟ. ನಿಮ್ಮ ಇತಿಹಾಸ, ಸಂಪ್ರದಾಯ, ಸಂಸ್ಕೃತಿ ಮತ್ತು ಜೀವನಶೈಲಿಯ ಉಳಿವಿಗಾಗಿ ನಡೆಯುವ ಹೋರಾಟ ಆಗಿದೆ. ತಮಿಳರ ಭಾಷೆ, ಸಂಸ್ಕೃತಿ ಮತ್ತು ಇತಿಹಾಸದ ಉಳಿವಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷವು ನಿಮ್ಮ ಜತೆ ಇರಲಿದೆ’ ಎಂದು ಹೇಳಿದರು.
‘ತಮಿಳು ಭಾಷೆಯು ಯಾವುದೇ ಭಾಷೆಗಿಂತ ಕಡಿಮೆಯಿಲ್ಲ. ತಮಿಳು ಭಾಷೆಯ ಮೇಲಿನ ದಾಳಿಯು ತಮಿಳರ ಮೇಲಿನ ಆಕ್ರಮಣಕ್ಕಿಂತ ಕಡಿಮೆಯೇನೂ ಅಲ್ಲ. ತಮಿಳು ಮತ್ತು ಬಂಗಾಳಿ ಸೇರಿದಂತೆ ಭಾರತದ ಜನರು ಮಾತನಾಡುವ ಇತರ ಭಾಷೆಗಳಿಲ್ಲದೆ ಭಾರತವಿಲ್ಲ’ ಎಂದರು.
ಪ್ರಜಾಪ್ರಭುತ್ವ ಮತ್ತು ಭಾರತದ ಸಂವಿಧಾನವನ್ನು ಉಳಿಸಲು ಈ ಚುನಾವಣೆಯಲ್ಲಿ ಹೋರಾಡುತ್ತಿದ್ದೇವೆ. ಇದರಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸ ನನ್ನದು- ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.