ADVERTISEMENT

ಬಿಜೆಪಿ ನಾಯಕರ ಮಾಧ್ಯಮಗೋಷ್ಠಿ ವೇಳೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಹೋದದ್ದು ಸರಿಯೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಫೆಬ್ರುವರಿ 2026, 6:01 IST
Last Updated 14 ಫೆಬ್ರುವರಿ 2026, 6:01 IST
<div class="paragraphs"><p>ರಾಹುಲ್‌ ಗಾಂಧಿ ಹಾಗೂ ಪ್ರಲ್ಹಾದ್‌ ಜೋಶಿ</p></div>

ರಾಹುಲ್‌ ಗಾಂಧಿ ಹಾಗೂ ಪ್ರಲ್ಹಾದ್‌ ಜೋಶಿ

   

ಸಂಸತ್‌ ಭವನದ ಆವರಣದಲ್ಲಿ ಮಾಧ್ಯಮದವೊಂದಿಗೆ ಮಾತನಾಡುತ್ತಿದ್ದ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಹಾಗೂ ಅಶ್ವಿನಿ ವೈಷ್ಣವ್‌ ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನು ಕಂಡು ಅಲ್ಲಿಂದ ತೆರಳುವ ಪ್ರಸಂಗ ಇತ್ತೀಚೆಗೆ ನಡೆದಿದೆ. ಆ ಸಂದರ್ಭದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಸದನ ವೇಳೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರಾಹುಲ್‌ ಮಾಡಿದ್ದ ಆರೋಪಗಳ ಕುರಿತು ಬುಧವಾರ (ಫೆ.11) ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತಿದ್ದ ಜೋಶಿ ಹಾಗೂ ವೈಷ್ಣವ್‌, ʼಕಾಂಗ್ರೆಸ್‌ ನಾಯಕ ಲೋಕಸಭೆಯಲ್ಲಿ ಮಾಡಿದ ಆರೋಪಗಳು ನಿರಾಧಾರವಾದವುʼ ಎಂದು ಹೇಳುತ್ತಿದ್ದರು. ಅಷ್ಟೊತ್ತಿಗೆ ಅಲ್ಲಿಗೆ ಬಂದ ರಾಹುಲ್‌, ʼಬನ್ನಿ ಒಟ್ಟಿಗೆ ಮಾತನಾಡೋಣʼ ಎಂದು ಆಹ್ವಾನಿಸಿದರು. ಆದರೆ, ಸಚಿವಧ್ವಯರು ತಕ್ಷಣವೇ ಅಲ್ಲಿಂದ ಹೊರಡಲು ಮುಂದಾದರು.

ADVERTISEMENT

ರಾಹುಲ್‌ ಅವರು ಜೋಶಿಯವರ ತೋಳನ್ನು ಹಿಡಿದು ಎಳೆಯುವ ಪ್ರಯತ್ನ ಮಾಡಿದರೂ, ಅವರು ನಿಲ್ಲಲಿಲ್ಲ.

ಆ ವೇಳೆ ಸ್ಥಳದಲ್ಲಿದ್ದ ಕಾಂಗ್ರೆಸ್‌ ನಾಯಕರು, ವ್ಯಂಗ್ಯವಾಗಿ ನಗುತ್ತಾ ಸಚಿವರನ್ನು ಬೀಳ್ಕೊಟ್ಟರು. ಆ ಸಂದರ್ಭದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರು, ಬೆಂಬಲಿಗರು ತಮ್ಮ ಮುಂದಾಳುಗಳ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಚಿವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ, ರಾಹುಲ್‌ ಮಧ್ಯಪ್ರವೇಶಿಸಿದ್ದು ಸರಿಯೇ? ಲೋಕಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ತಕ್ಕ ನಡೆಯಲ್ಲವೇ ಎಂಬಿತ್ಯಾದಿ ಚರ್ಚೆ ನಡೆಯುತ್ತಿದೆ.

'ಸಚಿವರಿಗೆ ರಾಹುಲ್‌ ಎದುರು ನಿಂತು ಮಾತನಾಡುವ ಧೈರ್ಯ ಇಲ್ಲ' ಎಂದು ಕಾಂಗ್ರೆಸ್‌ ಬೆಂಬಲಿಗರು ಮೂದಲಿಸಿದ್ದಾರೆ. ಇದಕ್ಕೆ ತಿರುಗೇಟು ಎಂಬಂತೆ, ಕೇಸರಿ ಪಾಳೆಯದ ಕಾರ್ಯಕರ್ತರು, 'ಮೂರ್ಖರೊಂದಿಗೆ ವಾದಕ್ಕಿಳಿದರೆ ತಮ್ಮ ಘನತೆಗೆ ಕುಂದುಂಟಾಗಲಿದೆ ಎಂದು ತೀರ್ಮಾನಿಸಿ ಸಚಿವರು ಅಲ್ಲಿಂದ ತೆರಳಿದರು' ಎಂದು ಪ್ರತಿಪಾದಿಸುತ್ತಿದ್ದಾರೆ.

ಚರ್ಚೆ ಅಲ್ಲಿಗೆ ನಿಂತಿಲ್ಲ, 'ರಾಹುಲ್‌ ಗಾಂಧಿ ಮಧ್ಯಪ್ರವೇಶಿಸಿದ್ದರಿಂದಲೇ, ಸಚಿವರು ಅಲ್ಲಿಂದ ತೆರಳಿದರು ಎಂದು ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ. ದೇಶದ ಜನರನ್ನುದ್ದೇಶಿಸಿ ಸಾರ್ವಜನಿಕವಾಗಿಯೇ ಹೇಳಿಕೆ ನೀಡುತ್ತಿದ್ದ ಕಾರಣ, ಅಲ್ಲಿಗೆ ರಾಹಲ್‌ ಬರಬಾರದಿತ್ತು ಎಂಬುದು ಸಮರ್ಥನೀಯವಲ್ಲ' ಎಂಬುದಾಗಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, 'ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಸಂಸತ್ತಿನಲ್ಲಿ ನಿಂತು ಉತ್ತರ ನೀಡಲಾಗದೆ, ಮಾಧ್ಯಮಗಳ ಎದುರು ಸುಳ್ಳು ಹೇಳುವ, ಟ್ರೋಲ್‌ ಪೇಜ್‌ಗಳ ಮೂಲಕ ತೇಜೋವಧೆ ಮಾಡುವ ಬಿಜೆಪಿಯವರ ಬಣ್ಣ ಬಯಲಾಗಿದೆ' ಎಂದಿದ್ದಾರೆ.

'ರಾಹುಲ್‌ ಗಾಂಧಿಯವರದ್ದು ಅಥವಾ ಕೇಂದ್ರ ಸಚಿವರ ಅಭಿಪ್ರಾಯಗಳು ಏನೇ ಇರಲಿ. ಒಂದು ಪಕ್ಷದ ನಾಯಕರು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಹೊತ್ತಲ್ಲಿ, ಮತ್ತೊಂದು ಪಕ್ಷದವರು ಮಧ್ಯಪ್ರವೇಶಿಸುವುದು ಸರಿಯಲ್ಲ' ಎಂಬ ಕಿವಿ ಮಾತನ್ನೂ ಕೆಲವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.