ADVERTISEMENT

ಮಹಾರಾಷ್ಟ್ರ ಮುಖಂಡರೊಂದಿಗೆ ಚರ್ಚೆ; ಕೋರ್ಟ್‌ಗೆ ರಾಹುಲ್‌ ಹಾಜರು

ಪಿಟಿಐ
Published 21 ಫೆಬ್ರುವರಿ 2026, 19:14 IST
Last Updated 21 ಫೆಬ್ರುವರಿ 2026, 19:14 IST
<div class="paragraphs"><p>ನವದೆಹಲಿಯಲ್ಲಿ ನಡೆದ ಎ.ಐ ಶೃಂಗಸಭೆಗೆ ಅಡ್ಡಿಪಡಿಸಿದ ಯುವ ಕಾಂಗ್ರೆಸ್‌ ವಿರುದ್ಧ ಪಟ್ನಾದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರು ರಾಹುಲ್‌ ಗಾಂಧಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು &nbsp;ಪಿಟಿಐ ಚಿತ್ರ</p></div>

ನವದೆಹಲಿಯಲ್ಲಿ ನಡೆದ ಎ.ಐ ಶೃಂಗಸಭೆಗೆ ಅಡ್ಡಿಪಡಿಸಿದ ಯುವ ಕಾಂಗ್ರೆಸ್‌ ವಿರುದ್ಧ ಪಟ್ನಾದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರು ರಾಹುಲ್‌ ಗಾಂಧಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು  ಪಿಟಿಐ ಚಿತ್ರ

   

ಮುಂಬೈ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಶನಿವಾರ ಮುಂಬೈನಲ್ಲಿ ಸ್ಥಳೀಯ ಕಾಂಗ್ರೆಸ್‌ ಮುಖಂಡರೊಂದಿಗೆ ಸಭೆ ನಡೆಸಿದರು. ಇತ್ತೀಚೆಗೆ ನಡೆದ ಬೃಹನ್‌ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಸೋಲಿನ  ಬಗ್ಗೆ ವಿವರಣೆ ಪಡೆದುಕೊಂಡರು. 

ಸದ್ಯದ ರಾಜಕೀಯ ಬೆಳವಣಿಗೆ ಕಾರಣದಿಂದ ಮಹಾರಾಷ್ಟ್ರದಲ್ಲಿ ಪಕ್ಷದ ಸಂಘಟನೆ ಬಲಪಡಿಸುವ ಕುರಿತು
ಅವರು ಚರ್ಚೆ ನಡೆಸಿದರು. ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಹರ್ಷವರ್ಧನ ಸಪ್ಕಾಲ್, ಸಂಸದೆ ವರ್ಷಾ ಗಾಯಕ್ವಾಡ್‌ ಸಭೆಯಲ್ಲಿ ಇದ್ದರು.

ADVERTISEMENT

ಸಪ್ಕಾಲ್‌ ಹೊಸ ಖಾತರಿದಾರ: ಶನಿವಾರ ಬೆಳಿಗ್ಗೆ ರಾಹುಲ್‌ ಗಾಂಧಿ ಅವರು ಭಿವಂಡಿ ಕೋರ್ಟ್‌ಗೆ  ಹಾಜರಾಗಿ 2024ರಲ್ಲಿ ತಮ್ಮ ವಿರುದ್ಧ ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರು ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಿದರು.

ಈ ಪ್ರಕರಣದಲ್ಲಿ ಹರ್ಷವರ್ಧನ ಸಪ್ಕಾಲ್ ಅವರು ತಮ್ಮ ನೂತನ ಖಾತರಿ
ದಾರರಾಗಲಿದ್ದಾರೆ ಎಂದು ರಾಹುಲ್‌ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಖಾತರಿದಾರರಾಗಿದ್ದ ಕೇಂದ್ರದ ಮಾಜಿ ಸಚಿವ ಶಿವರಾಜ್‌ ಪಾಟೀಲ್ ಅವರು ಡಿಸೆಂಬರ್‌ನಲ್ಲಿ ಮೃತಪಟ್ಟಿದ್ದರು. ಹೊಸ ಶ್ಯೂರಿಟಿ ನೀಡಲು ಖುದ್ದು ಹಾಜರಾಗುವಂತೆ ರಾಹುಲ್‌ಗೆ ಕೋರ್ಟ್‌ ಸೂಚಿಸಿತ್ತು. 

ಏನಿದು ಪ್ರಕರಣ: 2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸೋನಾಲೆ ಗ್ರಾಮದಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ರಾಹುಲ್‌, ‘ಮಹಾತ್ಮ ಗಾಂಧೀಜಿ ಅವರ ಹತ್ಯೆಯ ಹಿಂದೆ ಆರ್‌ಎಸ್‌ಎಸ್‌ ಕೈವಾಡ ಇದೆ’ ಎಂದು ಹೇಳಿದ್ದಾಗಿ ಆರೋಪಿಸಿ, ಆರ್‌ಎಸ್‌ಎಸ್‌ ಕಾರ್ಯಕರ್ತ ರಾಜೇಶ್‌ ಕುಂಠೆ ಎಂಬುವರು ಪ್ರಕರಣ ದಾಖಲಿಸಿದ್ದಾರೆ. 

ಕಪ್ಪು ಬಾವುಟ ಪ್ರದರ್ಶಿಸಿದ ಬಿಜೆಪಿ

ಭಿವಂಡಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಠಾಣೆ ಜಿಲ್ಲೆಯ ಮುಲುಂದ್‌ ಟೋಲ್‌ ಬಳಿ  ರಾಹುಲ್‌ ಅವರಿಗೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ನವದೆಹಲಿಯಲ್ಲಿ ನಡೆದ ಎ.ಐ ಶೃಂಗಸಭೆಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಯುವ ಕಾಂಗ್ರೆಸ್ ಕಾರ್ಯಕರ್ತರು ದೇಶದ ಮಾನವನ್ನು ಹರಾಜು ಹಾಕಿದ್ದಾರೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.