
ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ರವನೀತ್ ಬಿಟ್ಟು ನಡುವೆ ಬುಧವಾರ ಸಂಸತ್ ಭವನದಲ್ಲಿ ಸಣ್ಣ ಪ್ರಮಾಣದ ಮಾತಿನ ಚಕಮಕಿ ನಡೆಯಿತು.
ಕಲಾಪದಿಂದ ಅಮಾನತುಗೊಂಡ ಸಂಸದರ ಪ್ರತಿಭಟನೆಯ ಬಳಿಗೆ ಬಂದ ಬಿಜೆಪಿ ನಾಯಕ ರವನೀತ್ ಬಿಟ್ಟು ಅವರನ್ನು ರಾಹುಲ್ ಗಾಂಧಿ ‘ದೇಶದ್ರೋಹಿ ಸ್ನೇಹಿತ’ ಎಂದು ಕರೆದಿದ್ದಾರೆ.
ಇದಕ್ಕೂ ಮೊದಲು ಬಿಟ್ಟು ಅವರು ಕಾಂಗ್ರೆಸ್ನಿಂದ ಮೂರು ಭಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಮಾತ್ರವಲ್ಲ, ಕಾಂಗ್ರೆಸ್ ಸರ್ಕಾರದಲ್ಲಿ ರೈಲ್ವೆ ಖಾತೆಯ ರಾಜ್ಯ ಸಚಿವರು ಕೂಡ ಆಗಿದ್ದರು. ಅವರು 2024ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು.
ಸಂಸತ್ ಭವನದ ಮಕರ ದ್ವಾರದ ಬಳಿ ಪ್ರತಿಭಟನೆ ಕುಳಿತಿದ್ದ ಕಾಂಗ್ರೆಸ್ ಸಂಸದರನ್ನು ‘ಯುದ್ಧ ಗೆದ್ದವರಂತೆ ಕುಳಿತಿದ್ದಾರೆ’ ಎಂದು ಬಿಟ್ಟು ಅವರು ಛೇಡಿಸಿದರು.
ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ‘ನೋಡಿ ದೇಶದ್ರೋಹಿ ನಡೆದುಕೊಂಡು ಬರುತ್ತಿದ್ದಾನೆ, ಅವನ ನಡಿಗೆಯ ವೇಗ ನೋಡಿ’ ಎಂದು ಹೇಳಿದರು. ಅಷ್ಟಕ್ಕೆ ಸುಮ್ಮನಾಗದೆ, ‘ನನ್ನ ದೇಶದ್ರೋಹಿ ಸ್ನೇಹಿತ’ ಎಂದು ಹಸ್ತಲಾಘವ ನೀಡಲು ಮುಂದಾದರು.
ಈ ಸಂದರ್ಭದಲ್ಲಿ ಬಿಟ್ಟು ಅವರು ಕಾಂಗ್ರೆಸ್ ದೇಶವನ್ನೇ ಮಾರಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದರು ಬಿಜೆಪಿ ದೇಶವನ್ನು ಮಾರಿದೆ ಎಂದು ಘೋಷಣೆ ಕೂಗಿದರು. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಬಿಟ್ಟು ಅಲ್ಲಿಂದ ಹೊರಟುಹೋದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.