ಕೊಚ್ಚಿ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಮಾಜ ಸುಧಾರಕ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ, ತಮ್ಮ ಪಕ್ಷದ ‘ಭಾರತ್ ಜೋಡೊ ಯಾತ್ರೆ’ಯನ್ನು ಬುಧವಾರ ಮಾದವನದಿಂದ ಪುನರಾರಂಭಿಸಿದರು. ರಾಹುಲ್ ಅವರಿಗೆ 14ನೇ ದಿನದ ಪಾದಯಾತ್ರೆಯಲ್ಲಿ ಪಕ್ಷದ ಹಿರಿಯ ನಾಯಕ ಸಚಿನ್ ಪೈಲಟ್,ವಯನಾಡು ಸಂಸದರು, ಪಕ್ಷದ ರಾಜ್ಯ ಘಟಕದ ಹಿರಿಯ ನಾಯಕರು ಸಾಥ್ ನೀಡಿದರು.
ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿರುವ ಚಿತ್ರವನ್ನು ರಾಹುಲ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.‘ಮಹಾನ್ ಆಧ್ಯಾತ್ಮಿಕ ನಾಯಕ, ದಾರ್ಶನಿಕ ಮತ್ತು ಸಮಾಜ ಸುಧಾರಕ ನಾರಾಯಣ ಗುರುಗಳಿಗೆ ಗೌರವ ಸಲ್ಲಿಸುವ ಮೂಲಕಈ ದಿನಕ್ಕೆ ಸ್ಫೂರ್ತಿದಾಯಕ ಆರಂಭ ಸಿಕ್ಕಿದೆ. ಅವರು ಬೋಧಿಸಿದ ಸಮಾನತೆಯ ಸಂದೇಶ ಸಾರುವುದು ‘ಭಾರತ್ ಜೋಡೊ ಯಾತ್ರೆ’ಯ ಪ್ರಮುಖ ಚಿಂತನೆಯಾಗಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮಾದವನದಿಂದ ಬೆಳಿಗ್ಗೆ 6.45ಕ್ಕೆ ಆರಂಭವಾದ ಮೊದಲ ಅವಧಿಯ ಯಾತ್ರೆ 13 ಕಿ.ಮೀ ಕ್ರಮಿಸಿ, ಎಡಪಳ್ಳಿ ತಲುಪಿತು. ಎರಡನೇ ಅವಧಿಯ ಪಾತ್ರೆ ಸಂಜೆ 5ಕ್ಕೆ ಕಲಮಸ್ಸೇರಿ ಪುರಸಭೆ ಕಚೇರಿ ಆವರಣದಿಂದ ಆರಂಭವಾಗಿ, ಪರಪೂರ್ ಜಂಕ್ಷನ್ ತಲುಪಿತು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.