ನವದೆಹಲಿ: ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಯುವಜನರು ಪ್ರಧಾನಿಗೆ ಬಡಿಗೆ ತೆಗೆದುಕೊಂಡು ಏಟು ನೀಡಲಿದ್ದಾರೆ" ಎಂದು ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಬುಧವಾರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, "ಪ್ರಧಾನಿ ಈಗ ಭಾಷಣ ಮಾಡುತ್ತಲೇ ಇದ್ದಾರೆ, ಆದರೆ ಆರು ತಿಂಗಳ ನಂತರ, ಅವರಿಗೆ ತಮ್ಮ ಮನೆ ಬಿಟ್ಟು ಹೊರಬರುವುದಕ್ಕೂ ಸಾಧ್ಯವಾಗುವುದಿಲ್ಲ. ಭಾರತದ ಯುವಜನರು ಬಡಿಗೆ ತೆಗೆದುಕೊಂಡು ಪ್ರಧಾನಿಗೆ ಬಡಿಯುತ್ತಾರೆ ಮತ್ತು ತಮಗೆ ಉದ್ಯೋಗ ಒದಗಿಸುವುದರ ಹೊರತಾಗಿ ಈ ದೇಶದ ಉದ್ಧಾರ ಸಾಧ್ಯವಿಲ್ಲ ಎಂಬುದನ್ನು ಅವರಿಗೆ ಅರ್ಥೈಸುತ್ತಾರೆ" ಎಂದು ಹೇಳಿದರು.
ಯುವಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಕೇಂದ್ರವು ವಿಫಲವಾಗಿದೆ ಎಂದು ದೂರಿದ ರಾಹುಲ್ ಗಾಂಧಿ, ದೇಶದ ನಿರುದ್ಯೋಗ ಪ್ರಮಾಣವು 45 ವರ್ಷಗಳಲ್ಲೇ ಗರಿಷ್ಠವಾಗಿದೆ. ಆದರೆ ಬಜೆಟ್ನಲ್ಲಾಗಲೀ ರಾಷ್ಟ್ರಪತಿ ಭಾಷಣದಲ್ಲಾಗಲೀ ಈ ಕುರಿತು ಏನನ್ನೂ ಹೇಳಿಲ್ಲ ಎಂದು ರಾಹುಲ್ ದೂರಿದರು.
ಇದಕ್ಕೂ ಮುನ್ನ ಮತ್ತೊಂದು ರ್ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, "ಯುವಜನರಿಗೆ ಉದ್ಯೋಗ ಸಿಗುವುದು ಪ್ರಧಾನಿ ನರೇಂದ್ರ ಮೋದಿಗೆ ಬೇಕಿಲ್ಲ. ಯಾಕೆಂದರೆ ಅವರ ರಾಜಕೀಯಕ್ಕೆ ಇದುವೇ ಆಮ್ಲಜನಕವಿದ್ದಂತೆ" ಎಂದು ಟೀಕಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.