ADVERTISEMENT

ತಂದೆಯ ಅನಾರೋಗ್ಯ ರಾಜಕೀಯಕ್ಕೆ ಬಳಸಿಕೊಳ್ಳಲೆತ್ನಿಸಿದ್ದ ರಾಹುಲ್: ಪರ್‍ರೀಕರ್ ಪುತ್ರ

ಉತ್ಪಲ್ ಪರ್‍ರೀಕರ್ ಆರೋಪ

ಪಿಟಿಐ
Published 14 ನವೆಂಬರ್ 2019, 15:54 IST
Last Updated 14 ನವೆಂಬರ್ 2019, 15:54 IST
ರಾಹುಲ್ ಗಾಂಧಿ ಮತ್ತು ಮನೋಹರ್ ಪರ್‍ರೀಕರ್ (ಸಂಗ್ರಹ ಚಿತ್ರ)
ರಾಹುಲ್ ಗಾಂಧಿ ಮತ್ತು ಮನೋಹರ್ ಪರ್‍ರೀಕರ್ (ಸಂಗ್ರಹ ಚಿತ್ರ)   

ಪಣಜಿ:‘ಕಾಂಗ್ರೆಸ್ ನಾಯಕರಾಹುಲ್ ಗಾಂಧಿ ಅವರು ಅನಾರೋಗ್ಯಪೀಡಿತರಾಗಿದ್ದ ನನ್ನ ತಂದೆಯನ್ನು ನೋಡಲು ಬಂದು ರಾಜಕೀಯ ಲಾಭ ಪಡೆಯಲು ಯತ್ನಿಸಿದ್ದರು’ ಎಂದು ಕೇಂದ್ರದ ಮಾಜಿ ರಕ್ಷಣಾ ಸಚಿವ ಮನೋಹರ್ ಪರ್‍ರೀಕರ್ ಪುತ್ರ ಉತ್ಪಲ್‍ಪರ್‍ರೀಕರ್ ಗುರುವಾರ ಆರೋಪಿಸಿದ್ದಾರೆ.

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

‘ರಫೇಲ್‌ ತೀರ್ಪು ಹೊರಬಿದ್ದಿದೆ. ಇದು ರಾಹುಲ್‌ ಗಾಂಧಿಗೆ ಒಳ್ಳೆಯ ಪಾಠ ಎಂದು ನಾನು ಭಾವಿಸಿದ್ದೇನೆ. ಅವರು ಮಾಡಿದ್ದು ಅಷ್ಟೊಂದು ಚತುರವಲ್ಲದ ರಾಜಕೀಯ ತಂತ್ರದ ಭಾಗ ಆಗಿರಬಹುದು. ಯಾಕೆಂದರೆ, ಅನಾರೋಗ್ಯಪೀಡಿತರಾಗಿದ್ದ ನನ್ನ ತಂದೆಯನ್ನು ನೋಡಲು ಅವರು ಬಂದದ್ದು ಕೂಡ ಹಾಗೆಯೇ’ ಎಂದು ಮೊದಲ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಬ್ರಿಟನ್‌ ಮೂಲದ ರಕ್ಷಣಾ ಗುತ್ತಿಗೆದಾರರ ಜತೆಗೆ ರಾಹುಲ್‌ ಕಾಣಿಸಿಕೊಂಡಿದ್ದರು ಮತ್ತು ಡೋಕ್ಳಾಮ್ಬಿಕ್ಕಟ್ಟಿನ ಸಂದರ್ಭದಲ್ಲಿ ಎದುರಾಳಿದೇಶದ (ಚೀನಾ) ರಾಯಭಾರಿಯನ್ನು ರಹಸ್ಯವಾಗಿ ಭೇಟಿಯಾಗಿದ್ದರು ಎಂದು ಮಾಧ್ಯಮ ವರದಿಗಳು ಪ್ರಕಟವಾಗಿದ್ದವು. ಇವನ್ನು ನಂಬುವುದಾದರೆ (ರಾಹುಲ್‌ ಮಾಡಿರುವುದು) ಕೈಗಾರಿಕಾ ಬೇಹುಗಾರಿಕೆ ಎಂಬ ಅನುಮಾನ ಮೂಡುತ್ತದೆ. ಆದರೆ, ಯಾವುದೇ ಗಟ್ಟಿ ಸಾಕ್ಷ್ಯಗಳು ಇಲ್ಲದ ಕಾರಣ ಅವರಿಗೆ ಲಾಭವಾಗಿದೆ. ಈ ಎಲ್ಲದರಿಂದ ಅವರು ಪಾಠ ಕಲಿತಿರಬಹುದು ಎಂದು ಆಶಿಸುತ್ತೇನೆ ಎಂದು ಉಳಿದೆರಡು ಟ್ವೀಟ್‌ಗಳಲ್ಲಿ ಉಲ್ಲೇಖಿಸಿದ್ದಾರೆ.

ತೀವ್ರವಾದ ಅನಾರೋಗ್ಯದಿಂದ ಬಳಲುತ್ತಿದ್ದ ಪರ್‍ರೀಕರ್ ಅವರನ್ನು ರಾಹುಲ್ ಗಾಂಧಿ ಗೋವಾ ಪ್ರವಾಸದ ವೇಳೆ ಜನವರಿ 29ರಂದು ಭೇಟಿ ಮಾಡಿದ್ದರು. ಬಳಿಕ, ಬೇಗನೆ ಗುಣಮುಖರಾಗುವಂತೆ ಹಾರೈಸಲು ಗೋವಾ ಮುಖ್ಯಮಂತ್ರಿ ಮನೋಹರ್ ಪರ್‍ರೀಕರ್ ಅವರನ್ನು ಭೇಟಿಯಾದೆ. ಇದು ಸೌಜನ್ಯದ ಭೇಟಿ ಎಂದು ಹೇಳಿದ್ದರು.

ಇದಾದ ಕೆಲವೇ ಗಂಟೆಗಳಲ್ಲಿ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುವಾಗ ಪರ್‍ರೀಕರ್ ಹೆಸರು ಉಲ್ಲೇಖಿಸಿದ್ದರು. ರಫೇಲ್ ಒಪ್ಪಂದ ಪ್ರಕರಣದಲ್ಲಿನ ತಮ್ಮ ಪಾತ್ರವನ್ನು ಪರ್‍ರೀಕರ್ ನಿರಾಕರಿಸಿದ್ದಾರೆ ಎಂದು ರಾಹುಲ್ ಹೇಳಿದ್ದರು. ಇದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.