ADVERTISEMENT

ಛತ್ತೀಸಗಡ: ಸಿ.ಎಂ ಘೋಷಣೆ ನಾಳೆ

ಸಿಂಹದೇವ್, ಬಘೆಲ್, ತಾಮ್ರಧ್ವಜ ಹಾಗೂ ಚರಣ್ ದಾಸ್ ನಡುವೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 16:19 IST
Last Updated 15 ಡಿಸೆಂಬರ್ 2018, 16:19 IST
tweet
tweet   

ನವದೆಹಲಿ: ಮಧ್ಯಪ್ರದೇಶ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಕಸರತ್ತು ಪೂರ್ಣಗೊಂಡ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಛತ್ತೀಸಗಡ ಮುಖ್ಯಮಂತ್ರಿ ಆಯ್ಕೆಗೆ ಶನಿವಾರ ಸರಣಿ ಸಭೆಗಳನ್ನು ನಡೆಸಿದರು.ಭಾನುವಾರ ಮುಖ್ಯಮಂತ್ರಿ ಘೋಷಣೆಯಾಗುವ ಸಾಧ್ಯತೆಯಿದೆ.

ಟಿ.ಎಸ್. ಸಿಂಹದೇವ್, ಭೂಪೇಶ್ ಬಘೆಲ್, ತಾಮ್ರಧ್ವಜ ಸಾಹು ಹಾಗೂ ಚರಣ್ ದಾಸ್ ಮಹಾಂತ್ ಅವರು ಮುಖ್ಯಮಂತ್ರಿ ಹುದ್ದೆಯ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.

ನಾಲ್ವರೂ ಆಕಾಂಕ್ಷಿಗಳ ಜೊತೆ ಇರುವ ಚಿತ್ರವನ್ನು ಟ್ವೀಟ್ ಮಾಡಿರುವ ರಾಹುಲ್, ಮುಖ್ಯಮಂತ್ರಿ ಆಯ್ಕೆ ಗೊಂದಲ ಬಗೆಹರಿದಿದೆ ಎಂಬ ಸೂಚನೆ ನೀಡಿದ್ದಾರೆ.

ADVERTISEMENT

‘ನೀವು ಎಷ್ಟೇ ತಂತ್ರಗಾರ, ಬುದ್ಧಿವಂತರಾಗಿದ್ದರೂ ಏಕಾಂಗಿಯಾಗಿ ಕಣಕ್ಕಿಳಿದರೆ ತಂಡವೊಂದರ ಎದುರು ಸೋಲಬೇಕಾಗುತ್ತದೆ’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಒಗ್ಗಟ್ಟಿನ ಮಹತ್ವವನ್ನು ತಿಳಿಸುವ ರೀಡ್ ಹೋಫ್‌ಮನ್ ಅವರ ಈ ಹೇಳಿಕೆಯ ಜೊತೆ ಮುಖ್ಯಮಂತ್ರಿ ಆಕಾಂಕ್ಷಿಗಳ ಚಿತ್ರವನ್ನು ಟ್ವೀಟ್‌ಗೆ ಲಗತ್ತಿಸಿದ್ದಾರೆ.

ಶಾಸಕಾಂಗ ಸಭೆ:ರಾಯಪುರದಲ್ಲಿ ಭಾನುವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿಎಲ್‌ಪಿ ನಾಯಕನ ಆಯ್ಕೆ ನಡೆಯಲಿದೆ ಎಂದು ಎಂದು ಛತ್ತೀಸಗಡ ಕಾಂಗ್ರೆಸ್ ಘಟಕದ ಅಧ್ಯಕ್ಷ ಪಿ.ಎಲ್. ಪೂನಿಯಾ ತಿಳಿಸಿದ್ದಾರೆ.

‘ಡಿಸೆಂಬರ್ 17ರಂದು ಸಂಜೆ 4.30ಕ್ಕೆ ಪ್ರಮಾಣವಚನ ಕಾರ್ಯಕ್ರಮಕ್ಕೆ ರಾಜ್ಯಪಾಲರು ಸಮಯ ನೀಡಿದ್ದಾರೆ. ಹೀಗಿರುವಾಗ ಆತುರವೇಕೆ?’ ಎಂದು ಅವರು ಹೇಳಿದ್ದಾರೆ.

ಸರಣಿ ಸಭೆ: ಮುಖ್ಯಮಂತ್ರಿ ಆಯ್ಕೆಗಾಗಿ ಕಳೆದ ಮೂರು ದಿನಗಳಿಂದ ರಾಹುಲ್ ನಿವಾಸದಲ್ಲಿ ಸರಣಿ ಸಭೆ ನಡೆದಿದ್ದವು. ಛತ್ತೀಸಗಡದ ಚುನಾವಣಾ ವೀಕ್ಷಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ನಡೆದ ಸಭೆಯಲ್ಲಿ ಭಾಗಿಯಾಗಿದ್ದರು.

ಮಧ್ಯಪ್ರದೇಶ ಹಾಗೂ ರಾಜಸ್ಥಾನದ ನಿಯೋಜಿತ ಮುಖ್ಯಮಂತ್ರಿಗಳ ಜೊತೆ ಇರುವ ಚಿತ್ರಗಳನ್ನು ಈ ಮೊದಲು ಟ್ವೀಟ್ ಮಾಡಿದ್ದ ರಾಹುಲ್, ಎರಡೂ ರಾಜ್ಯಗಳಲ್ಲಿ ನಾಯಕತ್ವ ವಿಷಯ ಬಗೆಹರಿದಿದೆ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.