ADVERTISEMENT

ಹಣಕಾಸು ಬಿಕ್ಕಟ್ಟು ನೀಗಿಸಿಕೊಳ್ಳು ಭೂಮಿ ಭೋಗ್ಯಕ್ಕೆ ನೀಡಲು ಮುಂದಾದ ರೈಲ್ವೆ ಇಲಾಖೆ

ಜಮೀನು ಅಭಿವೃದ್ಧಿಗಾಗಿ ಖಾಸಗಿಯವರಿಗೆ ನೀಡಲು ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 20:00 IST
Last Updated 13 ಅಕ್ಟೋಬರ್ 2019, 20:00 IST
   

ನವದೆಹಲಿ: ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿರುವ ಭಾರತೀಯ ರೈಲ್ವೆ ಇಲಾಖೆಯು, ಖಾಸಗಿಯವರಿಗೆ ಭೂಮಿಯನ್ನು ಭೋಗ್ಯಕ್ಕೆ ನೀಡಿ, ಅದರಿಂದ ಆದಾಯ ವೃದ್ಧಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ. ಸಂಗ್ರಹವಾದ ಹಣವನ್ನು ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಲಾಖೆಯ ಸುಪರ್ದಿಯಲ್ಲಿರುವ ಭೂಮಿಯನ್ನು ಗುರುತಿಸಿ, ಅದನ್ನು ಸರ್ಕಾರಿ–ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಅಭಿವೃದ್ಧಿಪಡಿಸುವ ಕೆಲಸ ವನ್ನು ‘ರೈಲ್ವೆ ಭೂಮಿ ಅಭಿವೃದ್ಧಿ ಪ್ರಾಧಿಕಾರ’ಕ್ಕೆ (ಆರ್‌ಎಲ್‌ಡಿಎ) ನೀಡಿದೆ.

ವಾಣಿಜ್ಯ ಸಂಕೀರ್ಣ ನಿರ್ಮಿಸಿ ಅಭಿವೃದ್ಧಿಪಡಿಸಲು ಖಾಸಗಿ ಬಿಲ್ಡರ್‌ಗಳಿಗೆ 45 ವರ್ಷಗಳ ಅವಧಿಗೆ ಜಮೀನು ಭೋಗ್ಯಕ್ಕೆ ನೀಡಲು ಇಲಾಖೆ ಮುಂದಾಗಿದೆ. ವಸತಿ ಕಟ್ಟಡಗಳಿಗೆ 99 ವರ್ಷಗಳಿಗೆ ಭೋಗ್ಯಕ್ಕೆ ನೀಡಲಾಗುತ್ತದೆ.

ADVERTISEMENT

‘ದೇಶದ ಬಹುತೇಕ ನಗರಗಳ ಹೃದಯ ಭಾಗಗಳಲ್ಲಿ ಇಲಾಖೆಗೆ ಸೇರಿದ ಭೂಮಿ ಇದೆ. ಈ ಜಾಗಗಳು ಹೋಟೆಲ್, ವಾಣಿಜ್ಯ ಸಂಕೀರ್ಣ, ಅಪಾರ್ಟ್‌ಮೆಂಟ್ ಮತ್ತು ಕಚೇರಿಗಳನ್ನು ಸ್ಥಾಪಿಸಲು ಸೂಕ್ತವಾಗಿವೆ’ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಾಸಗಿ ಕಂಪನಿಯವರಿಗೆ 150 ಮಾರ್ಗಗಳಲ್ಲಿ ರೈಲುಗಳನ್ನು ಓಡಿಸಲು ಅವಕಾಶ ನೀಡುವ ಹಾಗೂ 50 ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಪ್ರಸ್ತಾವಗಳನ್ನು ಪರಿಶೀಲಿಸಲು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ನೇತೃತ್ವದ ಸಮಿತಿಯನ್ನು ಕೆಲ ದಿನಗಳ ಹಿಂದೆ ರೈಲ್ವೆ ಇಲಾಖೆ ರಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.