ಅಶ್ವಿನಿ ವೈಷ್ಣವ್
ನವದೆಹಲಿ: ಉದ್ಯಮಗಳು ಮತ್ತು ಕೈಗಾರಿಕೆಗಳ ಸರಕುಗಳನ್ನು ಕಾಲಮಿತಿಯಲ್ಲಿ ನಿಗದಿತ ಸ್ಥಳಕ್ಕೆ ಸಾಗಣೆ ಮಾಡಲು ನೆರವಾಗುವ ನಿಟ್ಟಿನಲ್ಲಿ ಮೂರು ನೂತನ ಉಪಕ್ರಮಗಳಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ಚಾಲನೆ ನೀಡಿದರು.
ಉತ್ತರ ಪ್ರದೇಶದ ಸಮಗ್ರ ಲಾಜಿಸ್ಟಿಕ್ ಕೇಂದ್ರ, ದೆಹಲಿ–ಕೋಲ್ಕತ್ತ ಕಾಲಮಿತಿ ಸರಕುಸಾಗಣೆ ರೈಲು, ಮುಂಬೈ–ಕೋಲ್ಕತ್ತ ಮನೆಮನೆಗೆ ಪಾರ್ಸೆಲ್ ಸೇವೆಗೆ ಚಾಲನೆ ನೀಡಿದರು.
ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಸಿಒಎನ್ಸಿಒಆರ್) ಸಹಭಾಗಿತ್ವದಲ್ಲಿ ಈ ಉಪಕ್ರಮಗಳನ್ನು ಜಾರಿ ಮಾಡಲಾಗಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಸ್ತೆ ಮೂಲಕ ಸರಕು ಸಾಗಣೆ ಮಾಡುವ ವಿಧಾನಗಳಿಗೆ ಹೋಲಿಸಿದರೆ ಮನೆಮನೆಗೆ ಪಾರ್ಸೆಲ್ ಸೇವೆಯಿಂದ ಶೇ 7.5ರಷ್ಟು ಹಣ ಉಳಿತಾಯವಾಗುತ್ತದೆ ಮತ್ತು ಸರಕುಗಳನ್ನು ಶೇ 30ರಷ್ಟು ವೇಗವಾಗಿ ನಿರ್ದಿಷ್ಟ ಸ್ಥಳಕ್ಕೆ ತಲುಪಿಸಬಹುದು’ ಎಂದು ಅಶ್ವಿನಿ ವೈಷ್ಣವ್ ಅವರು ಹೇಳಿದರು.
ದೆಹಲಿ–ಕೋಲ್ಕತ್ತ ಸರಕುಸಾಗಣೆ ರೈಲುಗಳಂತೆ ಭವಿಷ್ಯದಲ್ಲಿ ಬೇರೆ ಮಾರ್ಗಗಳಲ್ಲಿಯೂ ಇದೇ ರೀತಿಯ ರೈಲು ಸೇವೆಯನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.