ಸಚಿವ ಅಶ್ವಿನಿ ವೈಷ್ಣವ್
ಐಜ್ವಾಲ್: ದೇಶದ ಈಶಾನ್ಯ ಭಾಗದಲ್ಲಿ ₹ 77,000 ಕೋಟಿ ಮೊತ್ತದ ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಹೇಳಿದ್ದಾರೆ.
ಮಿಜೋರಾಂನ ಮೊದಲ ರೈಲು ಮಾರ್ಗ ಬೈರಬಿ–ಸೈರಂಗ್ ಮತ್ತು ದೆಹಲಿ– ಐಜ್ವಾಲ್ ನಡುವೆ ಸಂಚರಿಸುವ ರಾಜ್ಯದ ಮೊದಲ ರಾಜಧಾನಿ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ನಂತರ ವೈಷ್ಣವ್ ಅವರು ಹೇಳಿಕೆ ನೀಡಿದ್ದಾರೆ.
ಮಿಜೋರಾಂಗೆ ರೈಲು ಸಂಪರ್ಕ ಕಲ್ಪಿಸಿರುವುದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಉದ್ಯೋಗಗಳು ಸೃಷ್ಟಿಯಾಗಲಿವೆ ಮತ್ತು ಸ್ಥಳೀಯ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಯೂ ತೆರೆದುಕೊಳ್ಳಲಿದೆ ಎಂದು ಅವರು ಹೇಳಿದರು.
2014ಕ್ಕೂ ಮುನ್ನ ಈಶಾನ್ಯ ಭಾರತದ ರೈಲ್ವೆಗೆ ಬಜೆಟ್ನಲ್ಲಿ ₹2000 ಕೋಟಿ ನೀಡಲಾಗಿತ್ತು. ಮೋದಿ ಅವರ ಸರ್ಕಾರ ಐದು ಪಟ್ಟು ಅಂದರೆ ₹10,000 ಕೋಟಿ ನೀಡಿದ್ದಾರೆ ಎಂದರು.
ಹಿಮಾಲಯದ ಪರ್ವತಗಳು ಮತ್ತು ಆಳ ಕಣಿವೆಗಳ ನಡುವೆ ಹಾದುಹೋಗುವ ಮಿಜೋರಾಂನ ಹೊಸ ರೈಲು ಮಾರ್ಗದಲ್ಲಿ 45 ಸುರಂಗ, 55 ದೊಡ್ಡ ಸೇತುವೆಗಳಿವೆ. ಮಿಜೋರಾಂನಲ್ಲಿರುವ ಸೇತುವೆಯು ದೆಹಲಿಯ ಕುತುಬ್ ಮಿನಾರ್ಗಿಂತಲೂ ದೊಡ್ಡದು. ಈ ಮಾರ್ಗದಿಂದ ಗುವಾಹಟಿ, ಕೋಲ್ಕತ್ತ ಮತ್ತು ದೆಹಲಿ ಸೇರಿ ಹಲವು ಸ್ಥಳಗಳೊಂದಿಗೆ ಸಂಪರ್ಕ ಸುಲಭವಾಗಿದೆ ಎಂದರು.
ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ, ಹೋಂ ಸ್ಟೇ ಇನ್ನಷ್ಟು ಅವಕಾಶ ಪಡೆಯಲಿವೆ. ಉದ್ಯೋಗಗಳೂ ಹೆಚ್ಚಲಿವೆ. ಇನ್ನೊಂದು ವಾರದಲ್ಲಿ ಸರಕು ಸಾಗಣೆ ಸೇವೆ ಆರಂಭವಾಗಲಿದೆ. ಅರಿಶಿಣ, ಶುಂಠಿ, ವಿಶೇಷ ಹಣ್ಣುಗಳ ಸಾಗಣೆಗಾಗಿ ಹವಾನಿಯಂತ್ರಿತ ಬೋಗಿ ಅಳವಡಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.