ADVERTISEMENT

ಶ್ರಮಿಕ್ ರೈಲಿನಲ್ಲಿ 1,700 ವಲಸೆ ಕಾರ್ಮಿಕರ ಪ್ರಯಾಣಕ್ಕೆ ಅವಕಾಶ; 3 ಬಾರಿ ನಿಲುಗಡೆ

ಏಜೆನ್ಸೀಸ್
Published 11 ಮೇ 2020, 7:49 IST
Last Updated 11 ಮೇ 2020, 7:49 IST
ಶ್ರಮಿಕ್‌ ವಿಶೇಷ ರೈಲಿನಲ್ಲಿ ವಲಸೆ ಕಾರ್ಮಿಕರ ಪ್ರಯಾಣ–ಪ್ರಜಾವಾಣಿ ಸಂಗ್ರಹ ಚಿತ್ರ
ಶ್ರಮಿಕ್‌ ವಿಶೇಷ ರೈಲಿನಲ್ಲಿ ವಲಸೆ ಕಾರ್ಮಿಕರ ಪ್ರಯಾಣ–ಪ್ರಜಾವಾಣಿ ಸಂಗ್ರಹ ಚಿತ್ರ   

ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಕೋವಿಡ್‌–19 ಲಾಕ್‌ಡೌನ್‌ನಿಂದಾಗಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಊರುಗಳಿಗೆ ಸಾಗಿಸಲು ರೈಲ್ವೆ ಸಚಿವಾಲಯ ವ್ಯವಸ್ಥೆ ಮಾಡಿರುವ ಶ್ರಮಿಕ್‌ ವಿಶೇಷ ರೈಲುಗಳ ಮಾರ್ಗಸೂಚಿಗೆ ಬದಲಾವಣೆ ತರಲಾಗಿದೆ.

ಶ್ರಮಿಕ್‌ ವಿಶೇಷ ರೈಲುಗಳಲ್ಲಿ ಪ್ರಯಾಣದ ಸಾಮರ್ಥ್ಯವನ್ನು 1,200ರಿಂದ 1,700ಕ್ಕೆ ಹೆಚ್ಚಿಸಲಾಗಿದೆ. ಸ್ಲೀಪರ್‌ ಬರ್ತ್‌ಗಳ ಸಂಖ್ಯೆಯು ಹೊಸ ಮಾರ್ಗಸೂಚಿ ಅನ್ವಯ ಹೆಚ್ಚಳ ಮಾಡಬೇಕು. ಹಾಗೇ ಈ ರೈಲುಗಳು ಕೊನೆಯ ನಿಲುಗಡೆ ಹೊರತು ಪಡಿಸಿ, ಮೂರು ನಿಲ್ದಾಣಗಳಲ್ಲಿ ನಿಲ್ಲಿಸಲು ಅವಕಾಶ ನೀಡಲಾಗಿದೆ.

ಅತಿ ಕಡಿಮೆ ರೈಲುಗಳ ಸಂಚಾರಕ್ಕೆ ಅನುಮತಿ ನೀಡಿರುವ ರಾಜ್ಯ ಸರ್ಕಾರಗಳೊಂದಿಗೆ ಕೇಂದ್ರ ಸಚಿವಾಲಯ ಮಾತುಕತೆ ನಡೆಸಿದ್ದು, ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರಿಗೆ ಅನುವಾಗಲು ಅವಕಾಶ ನೀಡುವಂತೆ ಕೇಳಿದೆ. ಗೃಹ ಸಚಿವ ಅಮಿತ್‌ ಶಾ ನಿರ್ದಿಷ್ಟವಾಗಿ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಪತ್ರ ರವಾನಿಸಿದ್ದು, 'ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿ ಪ್ರದೇಶಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರಮಿಕ್‌ ರೈಲುಗಳ ಸಂಚಾರಕ್ಕೆ ಸಹಕರಿಸಬೇಕು' ಎಂದು ಪ್ರಸ್ತಾಪಿಸಿದ್ದಾರೆ.

ADVERTISEMENT

ವಲಸೆ ಕಾರ್ಮಿಕರು ವ್ಯವಸ್ಥೆ ಮಾಡಲಾಗಿರುವ ವಿಶೇಷ ರೈಲುಗಳ ಬಳಕೆ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಗಳು ಗಮನಹರಿಸಬೇಕು. ಅವರು ಯಾರೂ ರಸ್ತೆಗಳಲ್ಲಿ ನಡೆಯುತ್ತ ಸಾಗುವುದು ಅಥವಾ ರೈಲ್ವೆ ಹಳಿಗಳ ಮೇಲೆ ಪ್ರಯಾಣಿಸದಂತೆ ನಿಗಾವಹಿಸಬೇಕೆಂದು ಅಮಿತ್‌ ಶಾ ತಿಳಿಸಿದ್ದಾರೆ.

ಮೇ 1ರಿಂದ ಭಾರತೀಯ ರೈಲ್ವೆ 428 ಶ್ರಮಿಕ್‌ ವಿಶೇಷ ರೈಲುಗಳ ಕಾರ್ಯಾಚರಣೆ ನಡೆಸಿದೆ. ದೇಶದ ವಿವಿಧ ಭಾಗಗಳಲ್ಲಿ ಸಿಲುಕಿದ್ದ 4.5 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರನ್ನು ನಿರ್ದಿಷ್ಟ ಸ್ಥಳಗಳಿಗೆ ತಲುಪಿಸಿದೆ.

ಮೇ 9ರವರೆಗೂ ಗಮ್ಯ ತಲುಪಿರುವ 287 ರೈಲುಗಳ ಪೈಕಿ; 127 ರೈಲುಗಳು ಉತ್ತರ ಪ್ರದೇಶ, 87 ರೈಲುಗಳು ಬಿಹಾರ, 24 ರೈಲುಗಳು ಮಧ್ಯ ಪ್ರದೇಶ, ಒಡಿಶಾಗೆ 20, ಜಾರ್ಖಂಡ್‌ಗೆ 16, ರಾಜಸ್ಥಾನಕ್ಕೆ 4, ಮಹಾರಾಷ್ಟ್ರಕ್ಕೆ 3, ತೆಲಂಗಾಣ ಹಾಗೂ ಪಶ್ಚಿಮ ಬಂಗಾಳಕ್ಕೆ ತಲಾ ಎರಡು ರೈಲುಗಳು, ಆಂಧ್ರ ಪ್ರದೇಶ, ಹಿಮಾಚಲ ಪ್ರದೇಶಕ್ಕೆ ತಲಾ ಒಂದು ರೈಲು ತಲುಪಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.