ನವದೆಹಲಿ: ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 18 ಜನರು ಮೃತಪಟ್ಟ ದುರ್ಘಟನೆ ನಡೆದ ವಾರಗಳ ನಂತರ, ಎಚ್ಚೆತ್ತಿರುವ ರೈಲ್ವೆ ಸಚಿವಾಲಯವು ದೇಶದ 60 ರೈಲ್ವೆ ನಿಲ್ದಾಣಗಳ ಹೊರಗೆ ಕಾಯುವ ಪ್ರದೇಶ ಸ್ಥಾಪನೆಗೆ ಮುಂದಾಗಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಣ ಕುರಿತು ಉನ್ನತ ಮಟ್ಟದ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ದೇಶದಾದ್ಯಂತ 60 ನಿಲ್ದಾಣಗಳ ಹೊರಗೆ ಶಾಶ್ವತ ಕಾಯುವ ಪ್ರದೇಶಗಳನ್ನು ನಿರ್ಮಾಣ ಮಾಡುವ ನಿರ್ಧಾರವನ್ನು ಪ್ರಕಟಿಸಿದರು.
‘ನವದೆಹಲಿ, ಆನಂದ್ ವಿಹಾರ್, ವಾರಾಣಸಿ, ಅಯೋಧ್ಯೆ ಮತ್ತು ಪಟ್ನಾ ನಿಲ್ದಾಣಗಳಲ್ಲಿ ಪೈಲಟ್ ಯೋಜನೆಗಳು ಪ್ರಾರಂಭವಾಗಿವೆ’ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ರೈಲುಗಳು ಪ್ಲಾಟ್ಫಾರ್ಮ್ಗೆ ಬಂದಾಗ ಮಾತ್ರ ಪ್ರಯಾಣಿಕರಿಗೆ ಪ್ಲಾಟ್ಫಾರ್ಮ್ಗಳಿಗೆ ಹೋಗಲು ಅವಕಾಶ ನೀಡಲಾಗುವುದು. ಇದು ನಿಲ್ದಾಣಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಲಾಗಿದೆ.
ಟಿಕೆಟ್ ಅಥವಾ ವೇಟಿಂಗ್ ಲಿಸ್ಟ್ ಟಿಕೆಟ್ ಇಲ್ಲದ ಪ್ರಯಾಣಿಕರು ಹೊರಗಿನ 'ಕಾಯುವ ಪ್ರದೇಶ'ದಲ್ಲಿ ಕಾಯಬೇಕಾಗುತ್ತದೆ. ದೃಢೀಕೃತ ಟಿಕೆಟ್ ಹೊಂದಿರುವವರಿಗೆ ಪ್ಲಾಟ್ಫಾರ್ಮ್ಗಳಿಗೆ ನೇರ ಪ್ರವೇಶವನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಮಹಾಕುಂಭದ ವ್ಯವಸ್ಥೆಗಳಿಂದ ಸ್ಫೂರ್ತಿ ಪಡೆದು, 12 ಮೀಟರ್ ಅಗಲ (40 ಅಡಿ) ಮತ್ತು ಆರು ಮೀಟರ್ ಅಗಲದ(20 ಅಡಿ) ಪಾದಚಾರಿ ಸೇತುವೆಯ ಎರಡು ಹೊಸ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಎಲ್ಲಾ ನಿಲ್ದಾಣಗಳಲ್ಲಿ ಸ್ಥಾಪಿಸಲಾಗುವುದು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಎಲ್ಲ ನಿಲ್ದಾಣಗಳು ಮತ್ತು ಪಕ್ಕದ ಪ್ರದೇಶಗಳಲ್ಲಿ ನಿಕಟ ಮೇಲ್ವಿಚಾರಣೆಗಾಗಿ ಹೆಚ್ಚಿನ ಸಂಖ್ಯೆಯ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದೂ ತಿಳಿಸಿದೆ.
ಇದಲ್ಲದೆ, ರೈಲ್ವೆ ಸಿಬ್ಬಂದಿಗೆ ಹೊಸ ಗುರುತಿನ ಚೀಟಿಗಳನ್ನು ನೀಡಲಾಗುವುದು ಇದರಿಂದ ಅಧಿಕೃತ ವ್ಯಕ್ತಿಗಳು ಮಾತ್ರ ನಿಲ್ದಾಣಕ್ಕೆ ಪ್ರವೇಶಿಸಬಹುದು ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.