ADVERTISEMENT

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವೆ: ರಜನಿಕಾಂತ್ 

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 19:47 IST
Last Updated 19 ಏಪ್ರಿಲ್ 2019, 19:47 IST
   

ಚೆನ್ನೈ: ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.2017ರಲ್ಲಿ ರಾಜಕೀಯ ಪ್ರವೇಶಿಸಿದ್ದ ರಜನಿಕಾಂತ್ ಈ ಬಾರಿಯ ಲೋಕಸಭಾ ಚುನಾವಣೆಯಿಂದ ದೂರವುಳಿದಿದ್ದರು.

ತಮಿಳುನಾಡಿನ 18ನೇ ವಿಧಾನಸಭಾ ಉಪ ಚುನಾವಣೆಯಲ್ಲಿ ನಟ ಕಮಲ್ ಹಾಸನ್ ತಮ್ಮ ಪಕ್ಷ ಮಕ್ಕಳ್ ನೀತಿಮೈಯಂ (ಎಂಎನ್‌ಎಂ)ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು.ಇಂತಿರುವಾಗ ರಜನೀಕಾಂತ್ ಚುನಾವಣೆಯಲ್ಲಿ ಯಾಕೆ ಸ್ಪರ್ಧಿಸುತ್ತಿಲ್ಲ? ಎಂಬ ಪ್ರಶ್ನೆ ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಎದ್ದಿತ್ತು.

‘ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆ 2021ಕ್ಕೆ ನಡೆಯಬೇಕಿದೆ. ಆದರೆ ಈಗಷ್ಟೇ 18 ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಆಡಳಿತಾರೂಢ ಎಐಎಡಿಎಂಕೆ ಬಹುಮತದ ಕೊರತೆ ಎದುರಿಸುತ್ತಿದೆ. ಉಪಚುನಾವಣೆಯಲ್ಲಿ ಅಗತ್ಯ ಗೆಲುವು ದೊರೆಯದಿದ್ದರೆ ಸರ್ಕಾರ ಉರುಳಬಹುದು. ರಾಜ್ಯವು ಚುನಾವಣೆ ಎದುರಿಸಬೇಕಾಗುತ್ತದೆ. ಈ ಬಗ್ಗೆ ಏನು ಹೇಳುತ್ತೀರಿ’ ಎಂದು ಪತ್ರಕರ್ತರು ರಜನಿ ಅವರನ್ನು ಪ್ರಶ್ನಿಸಿದ್ದಾರೆ.

ADVERTISEMENT

ಆಗ ರಜನಿ, ‘ಫಲಿತಾಂಶ ಬಂದ ಮೇಲೆ ಮಾತನಾಡುತ್ತೇನೆ’ ಎಂದಿದ್ದಾರೆ. ಹಾಗಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂದು ಪತ್ರಕರ್ತರು ಮರುಪ್ರಶ್ನಿಸಿದ್ದಾರೆ. ‘ಚುನಾವಣೆ ಯಾವಾಗ ನಡೆದರೂ ಸ್ಪರ್ಧಿಸಲು ನಾವು ತಯಾರಾಗಿದ್ದೇವೆ. 234 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದೇವೆ’ ಎಂದು ರಜನಿ ಹೇಳಿದ್ದಾರೆ.

ಇದೀಗ ಈ ಪ್ರಶ್ನೆಗೆ ಉತ್ತರಿಸಿದ ರಜನಿಕಾಂತ್, ರಾಜ್ಯದಲ್ಲಿ ಯಾವಾಗ ವಿಧಾನಸಭಾ ಚುನಾವಣೆ ನಡೆಯುತ್ತದೋ ಆಗ ಚುನಾವಣೆ ಸ್ಪರ್ಧಿಸಲು ಸಿದ್ದನಾಗಿದ್ದೇನೆ.ನಾನು ನನ್ನ ಅಭಿಮಾನಿಗಳನ್ನು ನಿರಾಸೆಗೊಳಿಸುವುದಿಲ್ಲ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.

ಏತನ್ಮಧ್ಯೆ, ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ರಜನಿ, ಮೇ 23ರಂದು ಫಲಿತಾಂಶ ತಿಳಿಯುತ್ತದೆ ಎಂದಿದ್ದಾರೆ.

ರಜನೀಕಾಂತ್ ಇಲ್ಲಿಯವರೆಗೆ ಅಧಿಕೃತವಾಗಿ ರಾಜಕೀಯ ಪಕ್ಷವನ್ನು ಘೋಷಣೆ ಮಾಡಿಲ್ಲ. ಆದರೆ ಅವರ ಅಭಿಮಾನಿ ಸಂಘ ರಜನಿ ಮಕ್ಕಳ್ ಮಂದ್ರಂ ರಾಜಕೀಯ ಪಕ್ಷಕ್ಕೆ ಮುನ್ನುಡಿಯಂತೆ ಕೆಲಸ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.