ಜೈಪುರ/ನವದೆಹಲಿ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಕೋವಿಡೋತ್ತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಜೈಪುರದ ‘ಎಸ್ಎಂಎಸ್’ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆ್ಯಂಜಿಯೋಪ್ಲಾಸ್ಟಿ ನಡೆಸಲಾಗಿದೆ.
‘ಗೆಹ್ಲೋಟ್ ಅವರಿಗೆ ಆ್ಯಂಜಿಯೋಪ್ಲಾಸ್ಟಿ ನಡೆಸಲಾಗಿದ್ದು, ಯಶಸ್ವಿಯಾಗಿ ಒಂದು ಸ್ಟೆಂಟ್ ಅಳವಡಿಸಲಾಗಿದೆ. ಅವರು ಸದ್ಯ ಆರೋಗ್ಯವಾಗಿದ್ದಾರೆ’ ಎಂದು ಜೈಪುರದ ‘ಎಸ್ಎಂಎಸ್’ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಾಂಶುಪಾಲ ಡಾ. ಸುಧೀರ್ ಭಂಡಾರಿ ತಿಳಿಸಿದ್ದಾರೆ.
70 ವರ್ಷ ವಯಸ್ಸಿನ ಗೆಹ್ಲೋಟ್ ಅವರಿಗೆ ಕಳೆದ ಏಪ್ರಿಲ್ನಲ್ಲಿ ಕೋವಿಡ್ ಸೋಂಕು ತಗುಲಿತ್ತು. ಬಳಿಕ ಅವರು ಚೇತರಿಸಿಕೊಂಡಿದ್ದರು.
ಇಂದು (ಶುಕ್ರವಾರ) ಮಧ್ಯಾಹ್ನ ಟ್ವೀಟ್ ಮಾಡಿದ್ದ ಗೆಹ್ಲೋಟ್, ‘ಕೋವಿಡ್ ನಂತರದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. ನಿನ್ನೆಯಿಂದ ಎದೆ ನೋವು ಇದೆ. ಈಗಷ್ಟೇ ನನ್ನ ಸಿಟಿ ಆ್ಯಂಜಿಯೊ ಆಯಿತು. ಆ್ಯಂಜಿಯೊಪ್ಲಾಸ್ಟಿ ನಡೆಸಬೇಕಿದೆ. ಇದು ಎಸ್ಎಂಎಸ್ ಆಸ್ಪತ್ರೆಯಲ್ಲಿ ನಡೆಯಲಿದ್ದು, ಸಂತಸದಿಂದ ಇದ್ದೇನೆ. ಚೆನ್ನಾಗಿದ್ದೇನೆ, ಶೀಘ್ರದಲ್ಲೇ ಕರ್ತವ್ಯಕ್ಕೆ ಮರಳಲಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ, ಹಾರೈಕೆಗಳಿರಲಿ’ ಎಂದು ಮನವಿ ಮಾಡಿದ್ದರು.
‘ಅಶೋಕ್ ಗೆಹ್ಲೋಟ್ ಜೀ, ನಿಮಗೆ ಉತ್ತಮ ಆರೋಗ್ಯ ದೊರೆಯಲಿ, ಬೇಗನೆ ಗುಣಮುಖರಾಗಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
‘ಗೆಹ್ಲೋಟ್ ಅವರು ಬೇಗನೆ ಹಾಗೂ ಸಂಪೂರ್ಣವಾಗಿ ಗುಣಮುಖರಾಗಲಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಫೇಸ್ಬುಕ್ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.