ನವದೆಹಲಿ: ರಾಜಸ್ಥಾನದ ಸಂಪುಟ ದರ್ಜೆ ಸಚಿವ ಭನ್ವರ್ ಲಾಲ್ ಮೇಘವಾಲ್ (72) ಸೋಮವಾರ ನಿಧನರಾದರು.
ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾದರು. ರಾಜಸ್ಥಾನ ಸರ್ಕಾರವು ಮಂಗಳವಾರ ರಾಜ್ಯದಾದ್ಯಂತ ಶೋಕಾಚರಣೆ ಘೋಷಿಸಿದ್ದು, ಎಲ್ಲ ಸರ್ಕಾರಿ ಕಚೇರಿಗಳು ಮುಚ್ಚಿರಲಿವೆ. ಸಚಿವರ ಗೌರವಾರ್ಥ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸಲು ಸೂಚನೆ ನೀಡಲಾಗಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನದ ಕಾಂಗ್ರೆಸ್ ಸರ್ಕಾರದಲ್ಲಿ ಭನ್ವರ್ ಲಾಲ್ ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವರಾಗಿದ್ದರು. ಸುಜನ್ಗಢದ ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದ ಅವರು ಶಿಕ್ಷಣ ಸಚಿವರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.
ವರದಿಗಳ ಪ್ರಕಾರ, ಮೇನಲ್ಲಿ ಭನ್ವರ್ ಲಾಲ್ ಅವರು ಮಿದುಳಿನ ಆಘಾತಕ್ಕೆ ಒಳಗಾಗಿದ್ದರು.
ಸಂತಾಪ ವ್ಯಕ್ತಪಡಿಸಿರುವ ಸಿಎಂ ಅಶೋಕ್ ಗೆಹ್ಲೋಟ್, '1980ರಿಂದಲೂ ನಾವು ಜೊತೆಗಿದ್ದೆವು. ಇಂಥ ಕಠಿಣ ಪರಿಸ್ಥಿತಿಯಲ್ಲಿ ಅವರ ಕುಟುಂಬದ ಸದಸ್ಯರಿಗೆ ದೇವರು ಶಕ್ತಿ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಟ್ವೀಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.