ADVERTISEMENT

ರಜೌರಿ ಉಗ್ರ ಕೃತ್ಯಕ್ಕೆ ಖರ್ಗೆ ಖಂಡನೆ: ಘಟನೆ ನೋವು ತಂದಿದೆ ಎಂದ ಎಐಸಿಸಿ ಅಧ್ಯಕ್ಷ

ನಾಗರಿಕ ಸಮಾಜದಲ್ಲಿ ಉಗ್ರರಿಗೆ ಜಾಗವಿಲ್ಲ ಎಂದ ಖರ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2023, 7:21 IST
Last Updated 3 ಜನವರಿ 2023, 7:21 IST
ಮಲ್ಲಿಕಾರ್ಜುನ ಖರ್ಗೆ (ಏಜೆನ್ಸಿ ಚಿತ್ರ)
ಮಲ್ಲಿಕಾರ್ಜುನ ಖರ್ಗೆ (ಏಜೆನ್ಸಿ ಚಿತ್ರ)   

ಬೆಂಗಳೂರು: ಜಮ್ಮು ಕಾಶ್ಮೀರದ ರಜೌರಿಯಲ್ಲಿ ನಡೆದ ಉಗ್ರರ ವಿಧ್ವಂಸಕ ಕೃತ್ಯವನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಂಡಿಸಿದ್ದಾರೆ.

ಟ್ವಿಟರ್‌ನಲ್ಲಿ ಅವರು ಈ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ.

‘ಜಮ್ಮು ಕಾಶ್ಮೀರದ ರಜೌರಿಯಲ್ಲಿ ನಡೆದ ಉಗ್ರರ ದಾಳಿಯಿಂದಾಗಿ, ಇಬ್ಬರು ಮಕ್ಕಳು ಸಹಿತ 6 ಮಂದಿಯ ಸಾವಿಗೀಡಾಗಿರುವ ಹಾಗೂ 15 ಮಂದಿ ಗಾಯಗೊಂಡಿರುವ ಘಟನೆ ಭಾರೀ ನೋವು ತಂದಿದೆ. ಈ ಹೀನಾಯ ಕೃತ್ಯವನ್ನು ಅದರಲ್ಲೂ ರಾಜ್ಯದ ಕಾಶ್ಮೀರಿ ಪಂಡಿತರ ವಿರುದ್ಧ ನಡೆದ ದಾಳಿಯನ್ನು ನಾವು ಖಂಡಿಸುತ್ತೇವೆ‘ ಎಂದು ಅವರು ಹೇಳಿದ್ದಾರೆ.

ADVERTISEMENT

‘ನಾಗರಿಕ ಸಮಾಜದಲ್ಲಿ ಉಗ್ರವಾದಕ್ಕೆ ಜಾಗವಿಲ್ಲ. ಈ ವಿಷಯದಲ್ಲಿ ದೇಶ ಒಗ್ಗಟ್ಟಾಗಿದೆ. ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಪ್ರತಿದಿನ ಹೋರಾಟ ಮಾಡುತ್ತಿರುವ ಭದ್ರತಾ ಪಡೆಗಳ ಜತೆ ನಾವಿದ್ದೇವೆ. ಘಟನೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಹೃದಯಪೂರ್ವಕ ಸಂತಾಪಗಳು‘ ಎಂದು ಅವರು ಬರೆದುಕೊಂಡಿದ್ದಾರೆ.

ಏನಿದು ಘಟನೆ?

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಭಾನುವಾರ ಸಂಜೆ ನಡೆದ ಭಯೋತ್ಪಾದಕ ದಾಳಿ ನಡೆದಿತ್ತು. ಈ ಘಟನೆಯಲ್ಲಿ ಕನಿಷ್ಠ ನಾಲ್ವರು ನಾಗರಿಕರು ಮೃತಪಟ್ಟಿದ್ದರು. ಇದರ ಬೆನ್ನಲೇ ಸೋಮವಾರ ಬಾಂಬ್‌ ಸ್ಪೋಟ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, 15 ಜನ ಗಾಯಗೊಂಡಿದ್ದರು.

ರಜೌರಿ ಪಟ್ಟಣದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಡ್ಯಾಂಗ್ರಿ ಎಂಬ ಗ್ರಾಮದ ಮೂರು ಮನೆಗಳ ಮೇಲೆ ಭಾನುವಾರ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ ಕನಿಷ್ಠ ನಾಲ್ವರು ನಾಗರಿಕರು ಮೃತಪಟ್ಟಿದ್ದರು. ಸೋಮವಾರ ಕೂಡ ಇದೇ ಗ್ರಾಮದಲ್ಲಿ ಮನೆಯೊಂದರ ಸಮೀಪ ಬಾಂಬ್‌ ಸ್ಫೋಟಿಸಲಾಗಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.