ನವದೆಹಲಿ: ಅಶೋಕ್ ಗಸ್ತಿ ಅವರ ನಿಧನದಿಂದ ತೆರವಾಗಿರುವ ರಾಜ್ಯಸಭೆಯ ಒಂದು ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯಾಗಿ ಪ್ರಕಾಶಕ, ಮುದ್ರಕ ಕೆ.ನಾರಾಯಣ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 1ರಂದು ಉಪಚುನಾವಣೆ ನಿಗದಿಯಾಗಿದ್ದು, ನಾಮಪತ್ರ ಸಲ್ಲಿಸಲು ನವೆಂಬರ್ 18 (ಬುಧವಾರ) ಕೊನೆಯ ದಿನವಾಗಿದೆ. ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಈ ಆಯ್ಕೆ ನಡೆಯಲಿದ್ದು, ಬಿಜೆಪಿಗೆ ಪೂರ್ಣ ಬಹುಮತ
ಇರುವ ಕಾರಣ ನಾರಾಯಣ ಅವರ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ. ದೇವಾಂಗ ಸಮುದಾಯದ ನಾರಾಯಣ ಮಂಗಳೂರು ಮೂಲದದವರು. ಬೆಂಗಳೂರಿನಲ್ಲಿ ಪ್ರಮುಖ ಪ್ರಕಾಶನ ಸಂಸ್ಥೆ (ಸ್ಪ್ಯಾನ್ ಪ್ರಿಂಟ್) ಹೊಂದಿದ್ದಾರೆ. ಬಹು ಬಣ್ಣದ ಮುದ್ರಣ (ಮಲ್ಟಿ ಕಲರ್ ಪ್ರಿಂಟಿಂಗ್) ತಂತ್ರಜ್ಞಾನವನ್ನು 1982ರಲ್ಲಿ ಮೊದಲ ಬಾರಿಗೆ ಬೆಂಗಳೂರಿಗೆ ಪರಿಚಯಿಸಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದಲ್ಲಿ ಸಕ್ರಿಯರಾಗಿದ್ದ ಇವರು, ದಶಕಗಳ ಹಿಂದೆ ರಾಜ್ಯದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕರಪತ್ರಗಳನ್ನು ಮುದ್ರಿಸಿಕೊಡುವ ಕಾರ್ಯವನ್ನು ನಿರ್ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.