ನವದೆಹಲಿ: ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡುವ ಮತ್ತುಭಯೋತ್ಪಾದನಾ ಕೃತ್ಯಗಳ ತನಿಖೆ ವೇಳೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಹೆಚ್ಚಿನ ಅಧಿಕಾರ ನೀಡುವ ‘ಕಾನೂನುಬಾಹಿರ ಚಟುವಟಿಕೆಗಳ ತಡೆ (ತಿದ್ದುಪಡಿ) ಮಸೂದೆ –2019’ಕ್ಕೆ ರಾಜ್ಯಸಭೆಯ ಅನುಮೋದನೆ ಶುಕ್ರವಾರ ದೊರೆತಿದೆ.
ಈ ಮಸೂದೆಗೆ ಈಗ ಸಂಸತ್ತಿನ ಎರಡೂ ಸದನಗಳ ಅನುಮೋದನೆ ದೊರೆತಂತಾಗಿದೆ. ಇನ್ನು ರಾಷ್ಟ್ರಪತಿಗಳ ಅಂಕಿತವಷ್ಟೇ ದೊರೆಯಬೇಕಿದೆ.
ಶುಕ್ರವಾರ ರಾಜ್ಯಸಭೆಯ ಕಲಾಪದ ವೇಳೆ ಮಸೂದೆ ಕುರಿತು ಚರ್ಚೆ ನಡೆಯಿತು. ಮಸೂದೆಯ ಕೆಲವು ಅಂಶಗಳ ಬಗ್ಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು. ಮಸೂದೆಯನ್ನು ಸಂಸತ್ತಿನ ಪರಿಶೀಲನಾ ಸಮಿತಿಗೆ ಕಳುಹಿಸುವ ನಿಲುವಳಿಯನ್ನು ಕಾಂಗ್ರೆಸ್ ಮಂಡಿಸಿತು. ಇತರ ವಿರೋಧ ಪಕ್ಷಗಳೂ ಈ ನಿಲುವಳಿಯನ್ನು ಬೆಂಬಲಿಸಿದವು. ಆದರೆ ನಿಲುವಳಿಯ ಪರವಾಗಿ 85 ಮತ್ತು ವಿರುದ್ಧವಾಗಿ 104 ಮತಗಳು ಬಂದವು. ಹೀಗಾಗಿ ನಿಲುವಳಿ ವಿಫಲವಾಯಿತು.
‘ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ. ಭಯೋತ್ಪಾದಕರೆಲ್ಲರೂ ಮನುಷ್ಯ ವಿರೋಧಿಗಳು. ಹೀಗಾಗಿ ಎಲ್ಲಾ ಪಕ್ಷಗಳೂ ಈ ಮಸೂದೆ
ಯನ್ನು ಬೆಂಬಲಿಸಬೇಕು’ ಎಂದು ಗೃಹ ಸಚಿವ ಅಮಿತ್ ಶಾ ಮನವಿ ಮಾಡಿಕೊಂಡರು.
ಆನಂತರ ಮಸೂದೆಯನ್ನು ಮತಕ್ಕೆ ಹಾಕಲಾಯಿತು. ಮಸೂದೆಯ ಪರ 147 ಮತ್ತು ವಿರುದ್ಧ 42 ಮತಗಳು ಬಂದವು. ಹೀಗಾಗಿ ಮಸೂದೆಗೆ ರಾಜ್ಯಸಭೆಯ ಅನುಮೋದನೆ ದೊರೆಯಿತು.
* ಸರ್ಕಾರದ ವಿರುದ್ಧದ ದನಿಯನ್ನು ದ್ರೋಹ ಎಂದು ಕರೆಯಲು ಈ ಮಸೂದೆ ಅವಕಾಶ ಮಾಡಿಕೊಡುತ್ತದೆ. ಸರ್ಕಾರವನ್ನು ಟೀಕಿಸಿದವರನ್ನು ದೇಶದ್ರೋಹಿ ಎನ್ನಲಾಗುತ್ತದೆ
–ಮನೋಜ್ ಕುಮಾರ್ ಝಾಆರ್ಜೆಡಿ ಸಂಸದ
*ಭಯೋತ್ಪಾದನೆಯನ್ನು ಹತ್ತಿಕ್ಕಲು ಕಠಿಣ ಕಾನೂನು ಬೇಕಿದೆ. ಈ ಮಸೂದೆ ದುರ್ಬಳಕೆ ಆಗುವುದಿಲ್ಲ. ಮಾನವ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲ
–ಅಮಿತ್ ಶಾ ಕೇಂದ್ರ ಗೃಹ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.