ಔರಂಗಬಾದ್: ಕೇಂದ್ರ ಸಚಿವ ನಾರಾಯಣ ರಾಣೆ ಅವರು ಇತರರ ಮೇಲೆ ದಾಳಿ ಮಾಡಲು ಬಿಜೆಪಿ ಸಾಕಿದ ನಾಯಿಯಾಗಿದ್ದು, ಆದರೆ ಅಂತಿಮವಾಗಿ ತನ್ನದೇ ಪಕ್ಷವನ್ನು ಕಚ್ಚುತ್ತಾರೆ ಎಂದು ಶಿವಸೇನಾ ಶಾಸಕಸಂತೋಷ್ ಬಂಗಾರ್ ಆರೋಪಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ನಾರಾಯಣ ರಾಣೆ ಅವರನ್ನು ಮಂಗಳವಾರ ಬಂಧಿಸಿ ತಡರಾತ್ರಿ ಬಿಡುಗಡೆಗೊಳಿಸಲಾಗಿತ್ತು. ಇದರಿಂದಾಗಿ ಬಿಜೆಪಿ ಹಾಗೂ ಶಿವಸೇನಾ ಪಕ್ಷದ ಮುಖಂಡರ ನಡುವೆ ತೀವ್ರ ವಾಕ್ಸಮರ ಏರ್ಪಟ್ಟಿದೆ.
ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಕಲಮ್ನೂರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಿವಸೇನಾ ಶಾಸಕ ಸಂತೋಷ್ ಬಂಗಾರ್, ಮಂಗಳವಾರ ರಾತ್ರಿ ತಮ್ಮ ತವರು ಜಿಲ್ಲೆಯಲ್ಲಿ ರಾಣೆ ವಿರುದ್ಧದ ಪ್ರತಿಭಟನೆಯ ವೇಳೆಯಲ್ಲಿ ಇಂತಹದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಣೆ ಅವರನ್ನು 'ಪಗ್' ತಳಿಯ ನಾಯಿ ಎಂದೂ ಕರೆದರು.
'ನಾರಾಯಣ ರಾಣೆ ಮನುಷ್ಯರಲ್ಲ, ಆತ ನಾಯಿ. 'ಪಗ್' ತಳಿಯ ನಾಯಿ. ಅವರನ್ನು ಕೊಂಕಣ ಹಾಗೂ ಮುಂಬೈಯ ಜನರು ತಿರಸ್ಕರಿಸಿದ್ದಾರೆ. ಈಗ ಭಾರತೀಯ ಜನತಾ ಪಕ್ಷವು ಈ ನಾಯಿಯನ್ನು ಇತರರ ಮೇಲೆ ದಾಳಿ ಮಾಡಲು ಸಾಕಿದೆ. ಆದರೆ ನಾನು ಬಿಜೆಪಿಗೆ ಹೇಳಲು ಬಯಸುತ್ತೇನೆಂದರೆ ಈ ನಾಯಿಯ ಬಗ್ಗೆ ಎಚ್ಚರದಿಂದಿರಬೇಕು. ಏಕೆಂದರೆ ಅದು ನಿಮ್ಮನ್ನೇ ಕಚ್ಚುತ್ತದೆ. ಅವರು ಎಂದಿಗೂ ಯಾರಿಗೂ ಸೇರಲಾರ, ಹಾಗಾದರೆ ನಿಮ್ಮವನಾಗುವುದು ಹೇಗೆ?' ಎಂದು ಪಕ್ಷದ ಜಿಲ್ಲಾಧ್ಯಕ್ಷರೂ ಆಗಿರುವ ಬಂಗಾರ್ ವಾಗ್ದಾಳಿ ನಡೆಸಿದರು.
'ನೀವು ಸೂರ್ಯನ ಮೇಲೆ ಉಗುಳಿದರೂ ಅದು ಅಲ್ಲಿಗೆ ತಲುಪುವುದಿಲ್ಲ. ಸೂರ್ಯನನ್ನು ಎರಡು ಕೈಗಳಿಂದ ಮುಚ್ಚಲು ಸಾಧ್ಯವಿಲ್ಲ. ನಮ್ಮ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಶ್ರೇಷ್ಠರು ಎಂಬುದನ್ನು ಜಗತ್ತೇ ನೋಡಿದೆ' ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.