ADVERTISEMENT

ಮುಂಬೈ ಕುರಿತ ಹೇಳಿಕೆಗೆ ಕಂಗನಾ ಕ್ಷಮೆ ಕೋರಲಿ: ಸಂಜಯ್ ರಾವುತ್

9ಕ್ಕೆ ಮುಂಬೈಗೆ ಹಿಂತಿರುಗುವೆ ತಾಕತ್ತಿದ್ದರೆ ತಡೆಯಲಿ: ಕಂಗನಾ ಸವಾಲ್

ಪಿಟಿಐ
Published 6 ಸೆಪ್ಟೆಂಬರ್ 2020, 16:35 IST
Last Updated 6 ಸೆಪ್ಟೆಂಬರ್ 2020, 16:35 IST
ಕಂಗನಾ ರನೋಟ್
ಕಂಗನಾ ರನೋಟ್   

ಮುಂಬೈ: ‘ಮಹಾರಾಷ್ಟ್ರ ಮತ್ತು ಮುಂಬೈ ಕುರಿತ ಹೇಳಿಕೆಗೆ ನಟಿ ಕಂಗನಾ ರನೋಟ್ ಕ್ಷಮೆ ಕೇಳಬೇಕು’ ಎಂದು ಶಿವಸೇನಾ ಮುಖಂಡ ಸಂಜಯ್ ರಾವುತ್ ಭಾನುವಾರ ಒತ್ತಾಯಿಸಿದ್ದಾರೆ.

ಟಿವಿ ವಾಹಿನಿಯೊಂದರಲ್ಲಿ ಕಂಗನಾ ಟ್ವೀಟ್‌ಗೆ ನೀಡಿದ್ದ ಪ್ರತಿಕ್ರಿಯೆ ಬಗ್ಗೆ ಕ್ಷಮೆ ಕೋರುತ್ತೀರಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ, ‘ಇಲ್ಲಿ ವಾಸಿಸುವ ಅಥವಾ ಕೆಲಸ ಮಾಡುವ ಯಾರೇ ಆಗಲಿ ಮುಂಬೈ, ಮಹಾರಾಷ್ಟ್ರ ಮತ್ತು ಮರಾಠಿಗರ ವಿರುದ್ಧ ಮಾತನಾಡಿದರೆ, ಅವರು ಮೊದಲು ಕ್ಷಮೆ ಕೋರಬೇಕು’ ಎಂದು ರಾವುತ್ ಉತ್ತರಿಸಿದರು.

‘ಮುಂಬೈ ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಏಕೆ ಅನಿಸುತ್ತಿದೆ’ ಎಂದು ಸೆ. 1ರಂದು ಕಂಗನಾ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಂಜಯ್ ರಾವುತ್ ‘ಮುಂಬೈ ಪೊಲೀಸರಿಗೆ ಹೆದರುತ್ತಿದ್ದರೆ ಕಂಗನಾ ಮುಂಬೈಗೆ ಹಿಂತಿರುಗಬಾರದು’ ಎಂದಿದ್ದರು.

ADVERTISEMENT

ಕಂಗನಾ ಸವಾಲ್: ಪ್ರಸ್ತುತ ಹಿಮಾಚಲ ಪ್ರದೇಶದ ತಮ್ಮ ಮನೆಯಲ್ಲಿರುವ ಕಂಗನಾ, ‘ನಾನು ಸೆ. 9ರಂದು ಮುಂಬೈಗೆ ಹಿಂತಿರುಗುತ್ತಿದ್ದೇನೆ. ಯಾರಿಗಾದರೂ ತಡೆಯುವ ತಾಕತ್ತಿದೆಯೇ’ ಎಂದು ಟ್ವೀಟ್ ಮೂಲಕ ಸವಾಲೆಸೆದಿದ್ದಾರೆ.

‘ಮುಂಬೈ ಪೊಲೀಸರನ್ನು ದೂಷಿಸುವಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು’ ಸಂಸದರೂ ಆಗಿರುವ ರಾವುತ್ ಶುಕ್ರವಾರ ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.