ಚೆನ್ನೈ: ಚುನಾವಣಾ ವೀಕ್ಷಕರು ಮತ್ತು ಅಧಿಕಾರಿಗಳು ಸಲ್ಲಿಸಿದ ವರದಿಯ ಆಧಾರದಲ್ಲಿ ತಮಿಳುನಾಡಿನ ವೆಲಚೇರಿ ವಿಧಾನಸಭೆ ಕ್ಷೇತ್ರ ಮತಗಟ್ಟೆ ಸಂಖ್ಯೆ 92ರಲ್ಲಿ ಇಂದು ಮರುಮತದಾನ ಆರಂಭವಾಗಿದೆ.
ಏಪ್ರಿಲ್ 6 ರಂದು ಮತದಾನ ಮುದಿದ ಬಳಿಕ ಇಬ್ಬರು ವ್ಯಕ್ತಿಗಳು ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ದ್ವಿಚಕ್ರ ವಾಹನದಲ್ಲಿ ಕೊಂಡೊಯ್ದ ಬಗ್ಗೆ ವರದಿಯಾಗಿತ್ತು. ಹೀಗಾಗಿ ಚುನಾವಣಾ ಆಯೋಗವು ಈ ಮತಕೇಂದ್ರದಲ್ಲಿ ಮರು ಮತದಾನ ನಡೆಸುವಂತೆ ಏಪ್ರಿಲ್ 13 ರಂದು ಆದೇಶಿಸಿತ್ತು.
ವಿಧಾನಸಭೆ ಕ್ಷೇತ್ರದಿಂದ ವಾಪಸ್ಆದಚುನಾವಣಾ ವೀಕ್ಷಕರು ಮತ್ತು ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ ಚುನಾವಣಾ ಆಯೋಗವು, ಏಪ್ರಿಲ್ 6ರಂದು ವೆಲಚೇರಿ ಕ್ಷೇತ್ರದ ಮತಗಟ್ಟೆ ಸಂಖ್ಯೆ 92ರಲ್ಲಿ ನಡೆದ ಮತದಾನವನ್ನುಜನರ ಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್ 58 (1) (ಬಿ) ಅಡಿಯಲ್ಲಿ ಅನೂರ್ಜಿತಗೊಳಿಸಿದೆ ಎಂದು ತಿಳಿಸಿತ್ತು. ಜೊತೆಗೆ, ಇಲ್ಲಿ ಏಪ್ರಿಲ್ 17ರಂದು ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಮರು ಮತದಾನ ನಡೆಸಲಾಗುವುದು ಎಂದೂ ಘೋಷಿಸಿತ್ತು.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಏಪ್ರಿಲ್ 6ರಂದು ಮತದಾನ ನಡೆದಿದೆ. ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕ ಸೇರಿದಂತೆ 12 ರಾಜ್ಯಗಳಲ್ಲಿ ಉಪಚುನಾವಣೆ
ವಿವಿಧ ಕಾರಣಗಳಿಂದ ತೆರವಾಗಿರುವ ಎರಡು ಲೋಕಸಭಾ ಕ್ಷೇತ್ರ ಹಾಗೂ 14 ವಿಧಾನಸಭಾ ಕ್ಷೇತ್ರಗಳಿಗೆ ದೇಶದ 12 ರಾಜ್ಯಗಳಲ್ಲಿ ಇಂದು ಉಪಚುನಾವಣೆ ನಡೆಯುತ್ತಿದೆ.
ಕರ್ನಾಟಕದಲ್ಲಿ ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಉಳಿದಂತೆ ಆಂಧ್ರಪ್ರದೇಶದ ತಿರುಪತಿ ಲೋಕಸಭೆ, ರಾಜಸ್ಥಾನದ ಮೂರು, ಗುಜರಾತ್, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ರಾಜಸ್ಥಾನ, ತೆಲಂಗಾಣ ಹಾಗೂ ಉತ್ತರಾಖಂಡ ರಾಜ್ಯಗಳ ತಲಾ ಒಂದೊಂದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಆರಂಭವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.