ಅಗರ್ತಲಾ (ಪಿಟಿಐ): ಟಿಪ್ರಸಾ ಜನಾಂಗದ ಸಮಸ್ಯೆಗಳಿಗೆ ಸಾಂವಿಧಾನಿಕ ಪರಿಹಾರ ಕಂಡುಕೊಳ್ಳಲು ಬಿಜೆಪಿಯೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ಟಿಪ್ರ ಮೋಥಾ ಪಕ್ಷವು ಭಾನುವಾರ ಹೇಳಿದೆ.
‘ಟಿಪ್ರ ಮೋಥಾ ತಮ್ಮ ಸಮಾಧಾನಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಹೇಳಿಕೆ ನೀಡಿದ ಒಂದು ದಿನದ ಬಳಿಕ ಪಕ್ಷ ಈ ಪ್ರತಿಕ್ರಿಯೆ ನೀಡಿದೆ.
ಈ ಕುರಿತು ಫೇಸ್ಬುಕ್ನಲ್ಲಿ ವಿಡಿಯೊವೊಂದನ್ನು ಅಪ್ಲೋಡ್ ಮಾಡಿರುವ ಟಿಪ್ರ ಮೋಥಾ ಮುಖ್ಯಸ್ಥ ಪ್ರದ್ಯೋತ್ ಮಾಣಿಕ್ಯ ದೇಬಬರ್ಮ ಅವರು, ತಮಗೆ ಮತ ನೀಡಿದ ಜನರಿಗೆ ತಾವು ನಿರಾಸೆ ಮಾಡುವುದಿಲ್ಲ ಎಂದರು.
‘ಆರ್ಥಿಕತೆ, ರಾಜಕೀಯ, ಭಾಷೆಗೆ ಸಂಬಂಧಿಸಿದಂತೆ ಸಾಂವಿಧಾನಿಕ ಹಕ್ಕುಗಳ ಕುರಿತು ಮಾತನಾಡಲು ಗೌರವಾನ್ವಿತವಾಗಿ ನಮ್ಮನ್ನು ಆಹ್ವಾನಿಸಿದರೆ, ನಾವು ಭಾಗವಹಿಸುತ್ತೇವೆ. ನಾವು ಮಣ್ಣಿನ ಮಕ್ಕಳು. ಈ ಮಾತುಕತೆಗಳು ಸಚಿವ ಖಾತೆಗಾಗಿ ವೈಯಕ್ತಿಕ ಲಾಭಕ್ಕಾಗಲೀ ಅಲ್ಲ’ ಎಂದು ಹೇಳಿದರು.
ಇದೇ ವೇಳೆ, ‘ಯಾವುದೇ ರಾಜಕೀಯ ಪಕ್ಷದವರು ತ್ರಿಪುರಾದ ಸ್ಥಳೀಯ ಜನರನ್ನು ನಿರ್ಲಕ್ಷಿಸಿ ಆಡಳಿತ ನಡೆಸಲು ಯೋಚಿಸಿದರೆ, ಅವರು ಈ ರಾಜ್ಯವನ್ನು ಸುಲಭವಾಗಿ ಆಳಲು ಸಾಧ್ಯವಾಗುವುದಿಲ್ಲ’ ಎಂದೂ ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.