ADVERTISEMENT

'ಡ್ರೋನ್‌, ಸುರಂಗಗಳು; ಭಾರತದ ವಿರುದ್ಧ ನೆರೆ ರಾಷ್ಟ್ರದ ಹಗೆತನಕ್ಕೆ ಸಾಕ್ಷಿ'

ಬಿಎಸ್‌ಎಫ್‌ 56ನೇ ದಿನಾಚರಣೆಯಲ್ಲಿ ಕೇಂದ್ರ ಸಚಿವ ನಿತ್ಯಾನಂದ ರೈ

ಪಿಟಿಐ
Published 1 ಡಿಸೆಂಬರ್ 2020, 11:51 IST
Last Updated 1 ಡಿಸೆಂಬರ್ 2020, 11:51 IST
ನಿತ್ಯಾನಂದ ರೈ
ನಿತ್ಯಾನಂದ ರೈ   

ನವದೆಹಲಿ: ಭಾರತ–ಪಾಕಿಸ್ತಾನ ಗಡಿಭಾಗದಲ್ಲಿ ಸುರಂಗಗಳು ಮತ್ತು ಡ್ರೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದು ನೆರೆಯ ರಾಷ್ಟ್ರದವರು ಭಾರತದ ವಿರುದ್ಧ ಹಗೆತನ ಸಾಧಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅಭಿಪ್ರಾಯಪಟ್ಟರು.

ಮಂಗಳವಾರ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) 56ನೇ ದಿನಾಚರಣೆಯಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತದ ಗಡಿಯ ಉದ್ದಕ್ಕೂ ನೆರೆಯ ರಾಷ್ಟ್ರದಿಂದ ಪದೇ ಪದೇ ಕದನ ವಿರಾಮ ಉಲ್ಲಂಘನೆಯಾಗುತ್ತಿದ್ದು, ಇದರಿಂದ ಅನಿಶ್ಚಿತ ವಾತಾವರಣ ನಿರ್ಮಾಣವಾಗಿದೆ' ಎಂದು ಪ್ರತಿಪಾದಿಸಿದರು.

‘ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯಗಳ ಕಳ್ಳಸಾಗಣೆ ಮತ್ತು ಒಳನುಸುಳುವಿಕೆಗಾಗಿ ನಮ್ಮ ನೆರೆಹೊರೆಯವರು ಭಾರತ-ಪಾಕಿಸ್ತಾನ ಗಡಿಯಲ್ಲಿ ಇಂಥ ಚಟುವಟಿಕೆಗಳನ್ನು ಮಾಡುತ್ತಾರೆ. ಇದಕ್ಕೆ ಗಡಿ ಭಾಗದಲ್ಲಿ ವಶಪಡಿಸಿಕಕೊಂಡಿರುವ ಡ್ರೋನ್‌ ಮತ್ತು ಸುರಂಗಗಳು ಸಾಕ್ಷಿಯಾಗಿವೆ' ಎಂದು ನಿತ್ಯಾನಂದ ರೈ ಆರೋಪಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ ಪ್ರತಿಕೂಲ ಹವಾಮಾನದಲ್ಲಿ ಗಡಿಭಾಗದಲ್ಲಿ ನಿಂತು ದೇಶವನ್ನು ರಕ್ಷಿಸುತ್ತಿರುವ ಯೋಧರ ಕಾರ್ಯವನ್ನು ಸಚಿವರು ಶ್ಲಾಘಿಸಿದರು. ‘ಮಹತ್ವದ ಕಾರ್ಯಕ್ರಮವೊಂದರ ಕಾರಣದಿಂದಾಗಿ ಗೃಹ ಸಚಿವ ಅಮಿತ್‌ ಶಾ ಅವರು ಈ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.